14.8.14


ಭಾರತದ ಸ್ವಾತಂತ್ರ್ಯ ಚಳುವಳಿ


೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರದ ಹಸ್ತಾಂತರ
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು. ಅಲ್ಪ ಕಾಲಾನಂತರ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವ್‍ನ ಉಪಾಯಗಳಿಂದ ವಂಗದ ಅಧಿಕಾರವನ್ನು ತನ್ನ ಕೈವಶಮಾಡಿಕೊಂಡಿತು. ಅಲ್ಲಿಂದ ಮುಂದೆ ಬಹುಬೇಗೆ ತಮ್ಮ ರಾಜಕೀಯ ನೀತಿಗಳಿಂದ ಭಾರತದ ಬಹುಭಾಗವನ್ನು ಅವರು ಕೈವಶ ಮಾಡಿಕೊಂಡರು. ಪ್ಲಾಸೀ ಕದನದಿಂದ ಸರಿಯಾಗಿ ನೂರು ವರ್ಷಗಳ ನಂತರ ಅಂದರೆ೧೮೫೭ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ(ಅಥವ ೧೮೫೭ರ ಸಿಪಾಯಿ ದಂಗೆ) ಕಿಡಿಕಾರಿತು. ಆಂಗ್ಲರ ದಬ್ಬಾಳಿಕೆಯವಿರುದ್ಧ ಸಿಪಾಯಿಗಳೂ, ರಾಜ್ಯಗಳೂ ತಿರುಗಿಬಿದ್ದು ಪ್ರತಿಭಟಿಸಿದವಾದರೂ, ವ್ಯವಸ್ಥಿತವಾದ ಯೋಜನೆಯಿಲ್ಲದಿದ್ದರಿಂದ ದಂಗೆ ಹತ್ತಿಕ್ಕಲ್ಪಟ್ಟಿತು. ಸಿಪಾಯಿ ದಂಗೆ ವಿಫಲವಾದ ಮೇಲೆ, ಭಾರತದ ವಿದ್ಯಾವಂತರು ಎಚ್ಚೆತ್ತುಕೊಂಡರು ಹಾಗೂ ರಾಜಕೀಯವಾಗಿ ಸಂಘಟಿತರಾದರು. ೧೮೮೫ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮೊದಲು ಬ್ರಿಟಿಷ್ ಸಾಮ್ರಾಜ್ಯದ ಅಧೀನತೆಯಲ್ಲಿಯೇ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು. ೨೦ನೇ ಶತಮಾನದ ಪ್ರಾರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗಿ, ಬಾಲ ಗಂಗಾಂಧರ ತಿಲಕಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು. ೧೯೧೮ ಹಾಗು ೧೯೨೨ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು. ಭಾರತದ ಎಲ್ಲೆಡೆಯಿಂದ ಅನೇಕ ಜನ ಈ ಆಂದೋಲನದಲ್ಲಿ ಭಾಗಿಗಳಾದರು. ೧೯೩೦ರಲ್ಲಿ ಪೂರ್ಣ ಸ್ವರಾಜ್ಯಕ್ಕೆ ಬದ್ಧವಾದ ಕಾಂಗ್ರೆಸ್ ೧೯೪೨ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿಎನ್ನುವ ಒತ್ತಾಯದ ಬೇಡಿಕೆಯನ್ನು ಮಾಡಿತು. ಬ್ರಿಟಿಷ ಆಡಳಿತವನ್ನು ಕೊನೆಗೊಳಿಸಲು ೧೯೪೨ರಲ್ಲಿ ಸುಭಾಷಚಂದ್ರ ಬೋಸ್ರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತಹಾಗು ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ, ಭಾರತವು ೧೫ ಆಗಸ್ಟ ೧೯೪೭ ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ವನ್ನು ಪಡೆಯಿತು.


ಯೂರೋಪಿನವರ ರಾಜ್ಯಭಾರ[ಬದಲಾಯಿಸಿ]


ರಾಬರ್ಟ್ ಕ್ಲೈವ್ ಪ್ಲಾಸಿ ಕದನವನ್ನು ಗೆದ್ದ ಮೇಲೆ ಮೀರ್ ಜಾಫರ್ ಜೊತೆಗೆ
ಪೋರ್ತುಗೀಯ ಅನ್ವೇಷಕ ವಾಸ್ಕೊ ಡ ಗಾಮಾ ಕಲ್ಲಿಕೋಟೆ ಬಂದರಕ್ಕೆ ೧೪೯೮ರಲ್ಲಿ ಆಗಮಿಸಿದ ನಂತರ, ಯುರೋಪಿನ ವ್ಯಾಪಾರಸ್ಥರು ಸಾಂಬಾರು ಪದಾರ್ಥಗಳ ವ್ಯಾಪಾರದ ಅನ್ವೇಷಣೆಯಲ್ಲಿ ಭಾರತದ ಕರಾವಳಿಗೆ ಬರತೊಡಗಿದರು. ೧೭೫೭ರಲ್ಲಿ ಪ್ಲಾಸಿ ಕದನದಲ್ಲಿ ರಾಬರ್ಟ ಕ್ಲೈವನ ಅಧೀನದಲ್ಲಿದ್ದ ಬ್ರಿಟಿಷ ಸೈನ್ಯ ಬಂಗಾಲದ ನವಾಬ ಸಿರಾಜುದ್ದೌಲನನ್ನು ಪರಾಜಯಗೊಳಿಸಿದ ಬಳಿಕ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಭದ್ರವಾಗಿ ನೆಲೆಗೊಂಡಿತು. ಇದನ್ನು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ನಾಂದಿ ಎಂದು ಗುರುತಿಸಲಾಗುತ್ತದೆ. ೧೭೬೫ರಲ್ಲಿಬಕ್ಸಾರ್ ಕಾಳಗದ ನಂತರ, ಬಂಗಾಲ, ಬಿಹಾರ ಮತ್ತು ಓರಿಸ್ಸಾಗಳ ಮೇಲೆ ಕಂಪನಿಗೆ ಆಡಳಿತದ ಹಕ್ಕುಗಳು ದೊರೆತವು.
ಹೊಸದಾಗಿ ಗೆದ್ದುಕೊಂಡ ಈ ಪ್ರಾಂತಗಳ ಆಡಳಿತವನ್ನು ನಿಭಾಯಿಸಲು ಹಾಗು ಬಲಪಡಿಸಲು ಬ್ರಿಟಿಷ್ ಸಂಸತ್ತು ಅನೇಕ ಶಾಸನಗಳನ್ನು ರಚಿಸಿತು. ೧೮೩೫ರಲ್ಲಿ ಇಂಗ್ಲಿಷ್ ಅನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಲಾಯಿತು. ಪಾಶ್ಚಾತ್ಯ ಶಿಕ್ಷಣ ಪಡೆದ ಶಿಷ್ಟವರ್ಗದ ಹಿಂದುಗಳು ಹಿಂದೂ ಧರ್ಮದಲ್ಲಿರುವ ವಿವಾದಾಸ್ಪದ ಸಾಮಾಜಿಕ ಪದ್ಧತಿಗಳಾದ ಜಾತಿ ಪದ್ಧತಿಬಾಲ್ಯ ವಿವಾಹಮತ್ತು ಸತಿ ಪದ್ಧತಿಗಳ ನಿವಾರಣೆಗೆ ಪ್ರಯತ್ನಪಟ್ಟರು. ಮುಂಬಯಿ ಮತ್ತು ಮದ್ರಾಸುಗಳಲ್ಲಿ ಪ್ರಾರಂಭವಾದ ಸಾಹಿತ್ಯಕ ಮತ್ತು ಚರ್ಚಾಕೂಟ ಸಮಾಜಗಳು ರಾಜಕೀಯ ಆಲೋಚನೆಯ ವೇದಿಕೆಗಳಾದವು. ಆರಂಭಕಾಲದ ಈ ಸುಧಾರಕರ ಶೈಕ್ಷಣಿಕ ಸಾಧನೆ ಮತ್ತು ಮುದ್ರಣ ಮಾಧ್ಯಮದ ಜಾಣತನದ ಉಪಯೋಗ ಇವುಗಳಿಂದಾಗಿ, ಭಾರತೀಯ ಸಾಮಾಜಿಕ ಮೌಲ್ಯಗಳನ್ನು ಹಾಗು ಧಾರ್ಮಿಕ ಆಚರಣೆಗಳನ್ನು ಅಪವರ್ತನಗೊಳಿಸದೆ, ವಿಶಾಲ ತಳಹದಿಯ ಸುಧಾರಣೆಗಳನ್ನು ತರುವ ಸಂಭಾವ್ಯತೆ ಬೆಳೆಯಿತು.
ಭಾರತೀಯ ಸಮಾಜದ ಮೇಲೆ ಆಧುನಿಕೀಕರಣದ ಈ ಪ್ರವೃತ್ತಿ ಕೆಲವು ಸುಧಾರಣಾಕಾರಿ ಪ್ರಭಾವ ಬೀರಿದರೂ ಸಹ, ಬ್ರಿಟಿಷ್ ಆಡಳಿತದಲ್ಲಿ ಭಾರತೀಯರ ದುರಪಚಾರ ಅಮಿತವಾಗಿತ್ತು.೯ನೆಯ ಲಾನ್ಸರ್ಸ್‍ ಪಡೆಯ ಹೆನ್ರಿ ಔವ್ರಿಯ ಆತ್ಮಕತೆಯಲ್ಲಿ ಸ್ವತಃ ಅನೇಕ ಬಾರಿ ನಿಷ್ಕಾಳಜಿಯಿಂದ ಸೇವಕರಿಗೆ ಕಟುವಾದ ಹೊಡೆತ ನೀಡುವುದನ್ನು ದಾಖಲಿಸಿದ್ದಾನೆ. ಫ್ರ್ಯಾಂಕ್ ಬ್ರೌನ್ ಎನ್ನುವ ಸಾಂಬಾರ ವ್ಯಾಪಾರಿ ಈ ನಿರ್ದಯ ವರ್ತನೆಯ ಕತೆಗಳಲ್ಲಿ ಏನೇನೂ ಉತ್ಪ್ರೇಕ್ಷೆ ಇಲ್ಲವೆಂದೂ, ಅಲ್ಲದೆ ಹೊಡೆತ ಕೊಡುವ ಉದ್ದೇಶದಿಂದಲೆ ಕೆಲವರು ಸೇವಕರನ್ನು ಇಟ್ಟುಕೊಂಡಿದ್ದರೆಂದು ದಾಖಲಿಸಿದ್ದಾನೆ. ಬ್ರಿಟೀಷರ ಅಧಿಕಾರ ಬಲ ಹೆಚ್ಚಿದಂತೆ ಸ್ಥಳೀಯ ಆಚಾರಗಳ ಅವಹೇಳನೆಯೂ ಹೆಚ್ಚತೊಡಗಿತು. ಉದಾಹರಣೆಗೆ ಮಸೀದಿಗಳಲ್ಲಿ ಮೋಜು ಏರ್ಪಡಿಸುವದು, ತಾಜಮಹಲಿನ ಛಾವಣಿಯ ಮೇಲೆ ಸೈನ್ಯದ ತುಕುಡಿಗಳ ವಾದ್ಯಮೇಳಕ್ಕೆ ಹೆಜ್ಜೆಕುಣಿತ ಹಾಕುವದು, ಬಜಾರಗಳ ಜನಜಂಗುಳಿಗಳಲ್ಲಿ ಚಾಟಿ ಬೀಸುತ್ತ ದಾರಿ ಮಾಡಿಕೊಳ್ಳುವದು (ಜನರಲ್ ಹೆನ್ರಿ ಬ್ಲೇಕ್ ವರ್ಣಿಸಿದಂತೆ) ಮತ್ತು ಸಿಪಾಯಿಗಳ ಜೊತೆ ಕೀಳು ವರ್ತನೆ ಮಾಡುವದು. ೧೮೪೯ರಲ್ಲಿ ಪಂಜಾಬ್ ಅನ್ನು ಬ್ರಿಟೀಷರು ತಮ್ಮದಾಗಿಸಿಕೊಂಡ ಬಳಿಕ, ಅನೇಕ ಸಿಪಾಯಿ ಬಂಡಾಯಗಳಾದವು; ಇವೆಲ್ಲವನ್ನೂ ಬಲಪ್ರಯೋಗದಿಂದ ಹತ್ತಿಕ್ಕಲಾಯಿತು.

''೧೮೫೭ ಕ್ಕೆ ಮುನ್ನ ಪ್ರಾಂತೀಯ ಚಳುವಳಿಗಳು[ಬದಲಾಯಿಸಿ]

೧೮೫೭ರ ಮುಂಚಿನ ಭಾರತದಲ್ಲಿ ವಿದೇಶಿ ಆಳ್ವಿಕೆಯ ವಿರುದ್ಧ ಹಲವು ಪ್ರಾಂತೀಯ ಚಳುವಳಿಗಳು ನಡೆದಿದ್ದವು. ಆದರೆ ಆ ಹೋರಾಟಗಳು ಏಕೀಕರಣಗೊಂಡಿರಲಿಲ್ಲವದುದರಿಂದ ಅವುಗಳನ್ನು ವಿದೇಶಿ ಆಡಳಿತಗಾರರು ಸುಲಭವಾಗಿ ಹತ್ತಿಕ್ಕಿದರು. ದಕ್ಷಿಣದ ಕೆಲವು ರಾಜರುಗಳು ವಿದೇಶಿ ಆಡಳಿತಗಾರ ವಿರುದ್ಧ ಹೋರಾಟಗಳನ್ನು ನಡೆಸಿದ್ದರು. ಟಿಪ್ಪು ಸುಲ್ತಾನ್ ಹಾಗು ಬ್ರಿಟೀಷರ ನಡುವೆ ನಡೆದ ಮೈಸೂರು ಯುದ್ಧಗಳು, ೧೭೮೭ ರಲ್ಲಿ ಗೋವಾದ ಮೇಲೆ ಪೋರ್ಚುಗೀಯನಿಯಂತ್ರಣವನ್ನು ವಿರೋಧಿಸಿ ನಡೆದ ಪಿಂಟೋಗಳ ಒಳಸಂಚು ಹೆಸರಿನ ಜನಾಂಗೀಯ ದಂಗೆ , ತಮಿಳುನಾಡಿನ ಇಂದಿನ ಟ್ಯುಟಿಕಾರಿನ್ ಜಿಲ್ಲೆಯನ್ನು ಆಳಿದ ವೀರ ಪಾಂಡ್ಯ ಕಟ್ಟಿ ಬೊಮ್ಮನ್ ನಡೆಸಿದ ಹೋರಾಟ ಇವುಗಳ ಉದಾಹರಣೆಗಳು. ವೀರ ಪಾಂಡ್ಯನು ಸ್ಥಳೀಯ ಜನರು ತಮ್ಮ ಕೃಷಿ ಉತ್ಪನ್ನಗಳ ಮೇಲೆ ವಿದೇಶಿ ಆಡಳಿತಗಾರರಿಗೆ ತೆರಿಗೆ ಕೊಡುವುದರ ಅಗತ್ಯವನ್ನು ಪ್ರಶ್ನಿಸಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದನು [೧]. ಉಳಿದ ಚಳುವಳಿಗಳಲ್ಲಿ ಸಂತಾಲರ ದಂಗೆ ಮತ್ತು ಬ್ರಿಟಿಷರಿಗೆ ಬಂಗಾಲದಲ್ಲಿ ಟಿಟುಮೀರ್ ಒಡ್ಡಿದ ಪ್ರತಿರೋಧಗಳು ಸೇರಿದ್ದವು.'Italic --122.167.4.122 ೦೫:೦೨, ೧೯ ಆಗಸ್ಟ್ ೨೦೧೨ (UTC)

೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ[ಬದಲಾಯಿಸಿ]


೧೮೫೭ರ ಸಿಪಾಯಿ ದಂಗೆ

ನವೆಂಬರ್ ೧೮೫೭ ರಲ್ಲಿ ದಂಗೆಕೋರರನ್ನು ೯೩ ನೇ ಹೈಲ್ಯಾಂಡರ್ ಹಾಗೂ ೪ ನೇ ಪಂಜಾಬು ತುಕಡಿ ಬಗ್ಗುಬಡಿದ ನಂತರದ ಸಿಕಂದರಾ ಬಾಗ್.
೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (೧೮೫೭ರ ಸಿಪಾಯಿ ದಂಗೆ) ೧೮೫೭-೧೮೫೮ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಉತ್ತರ ಮತ್ತು ಮಧ್ಯ ಭಾರತಗಳಲ್ಲಿ ಭುಗಿಲೆದ್ದ ದಂಗೆ. ಈ ದಂಗೆಯು ಭಾರತೀಯ ಸೈನಿಕರು ಮತ್ತು ಅವರ ಬ್ರಿಟಿಷ್ ಅಧಿಕಾರಿಗಳ ನಡುವಿನ ಜನಾಂಗೀಯ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳ ಫಲವಾಗಿತ್ತು. ಮುಘಲರು ಮತ್ತು ಮಾಜಿ ಪೇಶ್ವೆಗಳಂತಹ ಭಾರತೀಯ ರಾಜರುಗಳ ಕುರಿತಾದ ಬ್ರಿಟಿಷರ ಅಸಡ್ಡೆ ಮತ್ತು ಔಧ್ ಪ್ರಾಂತವನ್ನು ಬಲವಂತದಿಂದ ಸ್ವಾಧೀನ ಮಾಡಿಕೊಂಡದ್ದು ಭಾರತೀಯರಲ್ಲಿ ಆಕ್ರೋಶವನ್ನುಂಟು ಮಾಡಿದವು.ಡಾಲ್‍ಹೌಸಿಯ ರಾಜ್ಯಗಳನ್ನು ಕೈವಶ ತಗೆದುಕೊಳ್ಳುವ ತಂತ್ರಗಳಲ್ಲಿ ಪ್ರಮುಖವಾದ ಅತ್ಯಂತ ಅನ್ಯಾಯಕಾರಿ ದತ್ತು ಮಕ್ಕಲಿಗೆ ಹಕ್ಕಿಲ್ಲ, ಮೊಘಲರ ಉತ್ತರಾಧಿಕಾರಿಗಳನ್ನು ಅರಮನೆಯಿಂದ ದೆಹಲಿ ಬಳಿಯ ಕುತ್ಬ್‍ಗೆ ಓಡಿಸುವ ಸಂಚು ಅನೇಕ ಜನಗಳನ್ನು ಕೆರಳಿಸಿದವು.
ಆದರೆ ಸಿಪಾಯಿ ದಂಗೆಗೆ ನಿಕಟವಾದ ಕಾರಣವೆಂದರೆ ಬ್ರಿಟಿಷ್ ಸೈನ್ಯದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಲೀ-ಎನ್‍ಫೀಲ್ಡ್ (ಪಿ/೫೩) ಬಂದೂಕಿನ ತೋಟಾಗಳಿಗೆ ದನದ ಹಾಗೂ ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ಸುದ್ದಿ. ಸೈನಿಕರು ಕಾಡತೂಸುಗಳನ್ನು ತಮ್ಮ ಬಂದೂಕುಗಳಲ್ಲಿ ತುಂಬುವ ಮೊದಲು ಹಲ್ಲಿನಿಂದ ಕಚ್ಚಿ ಅವುಗಳನ್ನು ತೆರೆಯಬೇಕಾಗಿತ್ತು. ಹೀಗಾಗಿ ಅದರಲ್ಲಿ ಆಕಳು ಮತ್ತು ಹಂದಿಯ ಕೊಬ್ಬು ಇದ್ದರೆ ಹಿಂದು ಮತ್ತು ಮುಸ್ಲಿಮ್ ಸೈನಿಕರಿಗೆ ಮನಸ್ಸು ನೋಯುವಂತಿತ್ತು. ಫೆಬ್ರುವರಿ ೧೮೫೭ ರಲ್ಲಿ ಸಿಪಾಯಿಗಳು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು. ಬ್ರಿಟಿಷರು ತೋಟಾಗಳನ್ನು ಬದಲಿಸಲಾಗಿದೆಯೆಂದೂ, ಬೇಕಿದ್ದರೆ ಸಿಪಾಯಿಗಳು ಜೇನುಮೇಣ ಮತ್ತು ಸಸ್ಯತೈಲವನ್ನು ತಾವೇ ತಯಾರಿಸಿಕೊಳ್ಳಬಹುದೆಂದು ಹೇಳಿದರೂ, ಗಾಳಿಮಾತು ಅಳಿಯಲಿಲ್ಲ.
೧೮೫೭ರ ಮಾರ್ಚಿನಲ್ಲಿ, ೩೪ನೇ ದೇಶೀಯ ಪದಾತಿದಳದ ಸಿಪಾಯಿಯಾದ ಮಂಗಲ ಪಾಂಡೆ, ಬ್ರಿಟಿಷ್ ಸಾರ್ಜೆಂಟ್ (ದಳನಾಯಕ) ಒಬ್ಬನ ಮೇಲೆರಗಿ ಅಡ್‍ಜುಟೆಂಟ್ (ಸೇನಾಧಿಕಾರಿ) ಒಬ್ಬನಿಗೆ ಗಾಯ ಮಾಡಿದನು. ಜನರಲ್ (ಸೇನಾಪತಿ) ಹರ್ಸೇ, ಪಾಂಡೆಗೆ ಯಾವುದೋ 'ಧರ್ಮದ ಮನೋವ್ಯಾಧಿ' ತಗುಲಿದೆಯೆನ್ನುತ್ತಾ, ಪಾಂಡೆಯನ್ನು ಬಂಧಿಸಲು ಜಮಾದಾರ (ಆರಕ್ಷಕ ಪ್ರಮುಖ)ನಿಗೆ ಆದೇಶಿಸಿದನಾದರೂ, ಬಂಧಿಸಲು ಆತ ನಿರಾಕರಿಸಿದನು. ಏಪ್ರಿಲ್ ೭ ರಂದು ಮಂಗಲ್ ಪಾಂಡೆಯನ್ನು ಜಮಾದಾರನೊಂದಿಗೆ ನೇಣು ಹಾಕಲಾಯಿತು. ಸಾಮೂಹಿಕ ಶಿಕ್ಷೆಯಾಗಿ ಇಡೀ ತುಕಡಿಯನ್ನೇ ವಿಸರ್ಜಿಸಲಾಯಿತು. ಮೇ ೧೦ ರಂದು, ೧೧ ನೇ ಹಾಗೂ ೨೦ ನೇ ಅಶ್ವದಳಗಳು ಸೇರಿದಾಗ ಉಕ್ಕುವ ರೋಷದಿಂದ ಸವಾರರು ಅಧಿಕಾರಗಳ ಮಿತಿ ಮೀರಿ, ಮೇಲಧಿಕಾರಿಗಳನ್ನು ಬಗ್ಗು ಬಡಿದರು. ಅನಂತರ ೩ನೇ ತುಕಡಿಯನ್ನು ಸ್ವತಂತ್ರಗೊಳಿಸಿದ ಅವರು, ಮೇ ೧೧ ರಂದು ದೆಹಲಿಯನ್ನು ತಲುಪಿದರು. ಅಲ್ಲಿ ಉಳಿದ ಭಾರತೀಯರು ಅವರನ್ನು ಸೇರಿಕೊಂಡರು. ಕೆಲಸಮಯದಲ್ಲಿ ಬಂಡಾಯವು ಉತ್ತರ ಭಾರತದ ತುಂಬೆಲ್ಲ ಹರಡಿತು. ಕೆಲವು ಮುಖ್ಯ ನಾಯಕರೆಂದರೆ ಅವಧ್ ಪ್ರಾಂತ್ಯದ ಮಾಜಿ ದೊರೆಯ ಸಲಹೆಗಾರನಾದ ಅಹ್ಮದ್ ಉಲ್ಲಾನಾನಾ ಸಾಹೇಬ್; ಅವನ ಸೋದರಳಿಯ ರಾವ್ ಸಾಹೇಬ್ ಮತ್ತವನ ಅನುಯಾಯಿಗಳಾದ ತಾಂತ್ಯಾ ಟೋಪಿ ಮತ್ತು ಅಝೀಮುಲ್ಲಾ ಖಾನ್ಝಾನ್ಸಿಯ ರಾಣಿ ಲಕ್ಷ್ಮೀ ಭಾಯಿ;ಕುಂವರ್ ಸಿಂಹಬಿಹಾರದ ಜಗದೀಶಪುರದ ರಜಪೂತ ನಾಯಕ; ಮತ್ತು ಮುಘಲ್ ದೊರೆ ಬಹಾದುರ್ ಶಹಾನ ಸಂಬಂಧಿ ಫಿರೂಝ್ ಶಹಾ.
ಕೊನೆಯ ಮುಘಲ್ ಚಕ್ರವರ್ತಿ ಎರಡನೇ ಬಹಾದುರ್ ಶಹಾನ ವಾಸಸ್ಥಳವಾದ ಕೆಂಪು ಕೋಟೆಯನ್ನು ಸಿಪಾಯಿಗಳು ಮುತ್ತಿ ವಶಪಡಿಸಿಕೊಂಡರು. ರಾಜನು ಸಿಂಹಾಸನವನ್ನು ಮರಳಿ ಪಡೆಯಬೇಕೆಂದು ಅವರು ಪಟ್ಟು ಹಿಡಿದರು. ಅವನು ಮೊದಲು ಹಿಂಜರಿದನು, ಆದರೆ ನಂತರ ಅವರ ಬೇಡಿಕೆಯನ್ನೊಪ್ಪಿ ಬಂಡಾಯದ ಮುಂದಾಳು ಆದನು .
ಹೆಚ್ಚುಕಡಿಮೆ ಅದೇ ಸಮಯಕ್ಕೆ ಝಾನ್ಸಿಯಲ್ಲಿ ಸೈನ್ಯವು ಬಂಡೆದ್ದು ಬ್ರಿಟಿಶ್ ಸೈನ್ಯಾಧಿಕಾರಿಗಳನ್ನು ಕೊಂದಿತು . ಮೀರತ್ , ಕಾನ್ಪುರ , ಲಖನೌ ಮುಂತಾದ ಪ್ರದೇಶಗಳಲ್ಲಿ ದಂಗೆಗಳೆದ್ದವು. ಬ್ರಿಟಿಷರು ಪ್ರತಿಕ್ರಿಯಿಸುವದರಲ್ಲಿ ವಿಳಂಬವಾದರೂ ಅಪಾರ ಶಕ್ತಿಯೊಂದಿಗೆ ಪ್ರತಿಕ್ರಿಯೆಯನ್ನು ತೋರಿಸಿದರು. ಕ್ರಿಮಿಯಾ ಯುದ್ಧರಂಗದಲ್ಲಿದ್ದ ಹಾಗು ಚೀನಾದ ಕಡೆಗೆ ಹೊರಟಿದ್ದ ಸೈನ್ಯದಳಗಳನ್ನು ಭಾರತಕ್ಕೆ ತಿರುಗಿಸಿದರು. ದಿಲ್ಲಿಗೆ ಮುತ್ತಿಗೆ ಹಾಕುವ ಪೂರ್ವದಲ್ಲಿ, ದಿಲ್ಲಿಯ ಹತ್ತಿರವಿದ್ದ ಬಂಡುಕೋರರ ಪ್ರಮುಖ ಸೈನ್ಯದೊಂದಿಗೆ ಬ್ರಿಟಿಷರು ಬಾದಲ್-ಕೆ-ಸರಾಯಿಯಲ್ಲಿ ಹೋರಾಡಿ ಅವರನ್ನು ಮರಳಿ ದಿಲ್ಲಿಗೆ ಓಡಿಸಿದರು. ದೆಹಲಿಯ ಮುತ್ತಿಗೆಯು ೧ ಜುಲೈ ನಿಂದ ೩೧ ಆಗಸ್ಟ್ ವರೆಗೆ ಬಾಳಿತು. ಒಂದು ವಾರದ ರಸ್ತೆ ಕಾಳಗದ ನಂತರ ಬ್ರಿಟಿಷರು ದೆಹಲಿಯನ್ನು ಮತ್ತೆ ಆಕ್ರಮಿಸಿದರು. ಕೊನೆಯ ಮುಖ್ಯ ಕಾಳಗವು ಗ್ವಾಲಿಯರ್ ನಲ್ಲಿ ಜೂನ್ ೨೦೧೮೫೮ ರಂದು ನಡೆಯಿತು. ರಾಣಿ ಲಕ್ಷ್ಮೀ ಬಾಯಿ ಹತಳಾದದ್ದು ಈ ಕಾಳಗದಲ್ಲಿಯೇ. ೧೮೫೯ರ ಕೊನೆಯ ತನಕ ಅಲ್ಲಲ್ಲಿ ಕಾಳಗಗಳು ಮುಂದುವರೆದರೂ, ಬಂಡಾಯಕೋರರನ್ನು ಸೋಲಿಸಲಾಯಿತು.

ಅನಂತರದ ಫಲಿತಾಂಶ[ಬದಲಾಯಿಸಿ]

೧೮೫೭ರ ಯುದ್ಧವು ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಮುಖ್ಯ ತಿರುವಾಗಿತ್ತು. ಬ್ರಿಟೀಷರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯನ್ನು ರದ್ದುಗೊಳಿಸಿ ನೇರ ಬ್ರಿಟನ್ನಿನ ರಾಜಮನೆತನದ ಚಕ್ರಾಧಿಪತ್ಯದಡಿಗೆ ಭಾರತವನ್ನು ತಂದರು. ರಾಜಮನೆತನದ ಪ್ರತಿನಿಧಿಯಾಗಿ 'ವೈಸ್‍ರಾಯ್' ಪಟ್ಟವನ್ನು ಸ್ಥಾಪಿಸಲಾಯಿತು. ಈ ನೇರ ಆಡಳಿತ ಪದ್ದತಿಯ ಘೋಷಣೆಯ ಅಡಿಯಲ್ಲಿ, ಮಹಾರಾಣಿ ವಿಕ್ಟೋರಿಯ "ಭಾರತದ ರಾಜರುಗಳಿಗೆ, ನೇತಾರರಿಗೆ ಮತ್ತು ಜನರಿಗೆ" ಸಮಾನತೆಯನ್ನು ನೀಡುವುದಾಗಿ ಭರವಸೆ ನೀಡಿದಳು. ಆದರೆ ಸಿಪಾಯಿ ದಂಗೆಯಿಂದ ಭಾರತೀಯರಲ್ಲಿ ಮೂಡಿದ ಅವಿಶ್ವಾಸ ಮುಂದುವರೆದಿತ್ತು.
ಭಾರತೀಯರ ಬಲದ ಮೊದಲ ಪೆಟ್ಟಿಗೆ ಎಚ್ಚೆತ್ತುಕೊಂಡ ಬ್ರಿಟಿಷರು ಸುಧಾರಣೆಗಳನ್ನು ಹಮ್ಮಿಕೊಂಡರು; ಸರ್ಕಾರದಲ್ಲಿ ಭಾರತೀಯ ಮೇಲ್ವರ್ಗದವರನ್ನೂ, ರಾಜರುಗಳನ್ನೂ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದರು. ಭೂಕಬಳಿಕೆಯನ್ನು ನಿಲ್ಲಿಸಿ, ಧಾರ್ಮಿಕ ಸೌಹಾರ್ದತೆಯನ್ನು ತೋರಿಸುತ್ತಾ, ಪೌರ ಸೇವೆಗಳಲ್ಲಿ ಭಾರತೀಯರನ್ನು ಕೆಳಮಟ್ಟದ ಅಧಿಕಾರಿಗಳನ್ನಾಗಿ ನೇಮಿಸಲಾರಂಭಿಸಿದರು. ಅಲ್ಲದೆ, ದೇಶೀಯರಿಗಿಂತ ಬ್ರಿಟಿಷ್ ಸೈನಿಕರನ್ನು ಹೆಚ್ಚಾಗಿ ಸೈನ್ಯದಲ್ಲಿ ತುಂಬತೊಡಗಿದರು; ಶಸ್ತ್ರಾಸ್ತ್ರಗಳ ಬಳಕೆಯನ್ನು ಬ್ರಿಟಿಷರಿಗೆ ಮಾತ್ರ ಮಿತಿಗೊಳಿಸಿದರು.
ಎರಡನೇ ಬಹಾದುರ್ ಶಹಾನನ್ನು ಬರ್ಮಾದ ರಂಗೂನ್‍ಗೆ ಗಡಿಪಾರು ಮಾಡಲಾಯಿತು. ಅಲ್ಲಿ ಅವನು ೧೮೬೨ ರಲ್ಲಿ ಸತ್ತು ಮುಘಲ್ ವಂಶವು ಕೊನೆಯಾಯಿತು. ೧೮೭೭ ರಲ್ಲಿ ವಿಕ್ಟೋರಿಯಾ ಮಹಾರಾಣಿಯು ಭಾರತದ ಚಕ್ರವರ್ತಿನಿ ಎಂಬ ಬಿರುದನ್ನು ಧರಿಸಿದಳು .

ಸಂಘಟಿತ ಚಳುವಳಿಗಳ ಹುಟ್ಟು[ಬದಲಾಯಿಸಿ]

ಸಿಪಾಯಿ ದಂಗೆಯ ನಂತರದ ದಶಕಗಳಲ್ಲಿ ರಾಜಕೀಯ ಪ್ರಜ್ಞೆ, ಭಾರತೀಯರ ಲೋಕಾಭಿಪ್ರಾಯ, ಮತ್ತು ರಾಷ್ಟ್ರೀಯ ಮತ್ತು ಪ್ರಾಂತೀಯ ನಾಯಕರ ಹುಟ್ಟುಗಳಾದವು.
ಸಾಮಾಜಿಕ ಧಾರ್ಮಿಕ ಗುಂಪುಗಳ ಪ್ರಭಾವಗಳನ್ನು, ಅದೂ ಧಾರ್ಮಿಕತೆ ಪ್ರಮುಖ ಪಾತ್ರ ವಹಿಸುವಂಥ ದೇಶದಲ್ಲಿ, ಕಡೆಗಣಿಸಲಾಗದು. ಸ್ವಾಮಿ ದಯಾನಂದ ಸರಸ್ವತಿಯವರು ಸ್ಥಾಪಿಸಿದ ಆರ್ಯ ಸಮಾಜವು ಹಿಂದೂ ಸಮಾಜದಲ್ಲಿದ್ದ ಅಕೃ‍ತ್ಯಗಳನ್ನು ಸರಿಪಡಿಸುವ ಮತ್ತು ಕ್ರೈಸ್ತ ಧರ್ಮದ ಪ್ರಚಾರಕರನ್ನು ವಿರೋಧಿಸುವ ಗುರಿ ಹೊಂದಿತ್ತು. ರಾಜಾ ರಾಮ ಮೋಹನ ರಾಯರ ಬ್ರಹ್ಮೋ ಸಮಾಜವು ಕೂಡ ಸತಿವರದಕ್ಷಿಣೆಯಂಥ ದುಷ್ಟ ಪದ್ಧತಿಗಳ, ಅನಕ್ಷರತೆ ಮತ್ತು ಮೌಢ್ಯಗಳ ವಿರುದ್ಧ ಹೋರಾಡಿತು. ಈ ಸಮಾಜಗಳು ಭಾರತದ ಸಾಮಾನ್ಯ ಜನತೆಯಲ್ಲಿ ಜಾಗೃತಿ, ಅಭಿಮಾನ ಮತ್ತು ಸಮಾಜ ಸೇವೆಯ ಪ್ರವೃತ್ತಿಗಳನ್ನು ಹೆಚ್ಚಿಸುವಲ್ಲಿ ಪ್ರಮುಖವಾದವು. ಸ್ವಾಮಿ ವಿವೇಕಾನಂದರಾಮಕೃಷ್ಣ ಪರಮಹಂಸಶ್ರೀ ಅರಬಿಂದೋ, ಮುಂತಾದವರು ಧಾರ್ಮಿಕ ಸುಧಾರಣೆ ಮತ್ತು ಸಾಮಾಜಿಕ ಸ್ವಾಭಿಮಾನದ ಪ್ರಚಾರದ ಮೂಲಕ ಸಂಪೂರ್ಣ ಸ್ವಾತಂತ್ರ್ಯದ ಬಯಕೆಯನ್ನು ಸಾರ್ವಜನಿಕರಲ್ಲಿ ಹೂಡಿದರು. ಇದಲ್ಲದೆ ಬಂಕಿಮಚಂದ್ರ ಚಟರ್ಜಿಸುಬ್ರಹ್ಮಣ್ಯ ಭಾರತಿ,ರವೀಂದ್ರನಾಥ ಠಾಗೋರ್ ಮುಂತಾದವರು ಭಾವನಾತ್ಮಕ ಸಾಹಿತ್ಯದ ರಚನೆಯಿಂದ ಈ ಸ್ವಾತಂತ್ರ್ಯದ ಬಯಕೆಗೆ ಪ್ರೋತ್ಸಾಹ ನೀಡಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್[ಬದಲಾಯಿಸಿ]


ಬಾಲಗಂಗಾಧರನಾಥ ತಿಲಕ್
ನಿವೃತ್ತ ಬ್ರಿಟಿಶ್ ನಾಗರಿಕ ಅಧಿಕಾರಿ ಎ.ಓ.ಹ್ಯೂಮ್ ಮಾಡಿದ ಸಲಹೆಯಿಂದ ಪ್ರೇರಿತರಾಗಿ ೭೩ ಭಾರತೀಯ ಪ್ರತಿನಿಧಿಗಳು ಮುಂಬೈಯಲ್ಲಿ ೧೮೮೫ರಲ್ಲಿ ಸಭೆಸೇರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಿದರು. ಇವರಲ್ಲಿ ಬಹುತೇಕ ಜನರು ಪಾಶ್ಚಿಮಾತ್ಯ ಶಿಕ್ಷಣ ಪಡೆದ ಪ್ರಾಂತೀಯ ಗಣ್ಯರೂ; ಕಾನೂನು, ಶಿಕ್ಷಣ, ಮತ್ತು ಪತ್ರಿಕೋದ್ಯಮದಂಥ ವೃತ್ತಿಗಳಲ್ಲಿ ತೊಡಗಿದ್ದ ಯಶಸ್ವೀ ಮತ್ತು ಊರ್ಧ್ವಮುಖೀ ಜನರಾಗಿದ್ದರು. ಅವರು ತಮ್ಮ ವೃತ್ತಿಗಳಲ್ಲಿ ಪ್ರಾದೇಶಿಕ ಸ್ಪರ್ಧೆಯಿಂದಲೂ ಮತ್ತು ಅನೇಕ ಶಾಸಕೀಯ ಸಮಿತಿಗಳು, ವಿಶ್ವವಿದ್ಯಾಲಯಗಳು ಮತ್ತು ವಿಶೇಷ ಆಯೋಗಗಳಲ್ಲಿ ಅನೇಕ ಹುದ್ದೆಗಳಲ್ಲಿ ನಾಮಕರಣ ಹೊಂದಿಯೂ ರಾಜಕೀಯ ಅನುಭವವನ್ನು ಪಡೆದಿದ್ದರು. ದಾದಾಭಾಯಿ ನವರೋಜಿಯವರು ಕಾಂಗ್ರೆಸ್ ಸ್ಥಾಪನೆಗೆ ಕೆಲವು ವರ್ಷಗಳ ಮೊದಲೇ ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್‌ನ್ನು ಸ್ಥಾಪಿಸಿದ್ದರು. ಐ.ಎನ್.ಎ. ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗಿ ಇನ್ನೂ ದೊಡ್ಡದಾದ ರಾಷ್ಟ್ರೀಯ ವೇದಿಕೆಯನ್ನು ನಿರ್ಮಿಸಿತು. ಕಾಂಗ್ರೆಸ್ಸಿನ ಪ್ರಾರಂಭದ ಹೊತ್ತಿಗೆ, ಯಾವದೇ ನಿಶ್ಚಿತ ಧ್ಯೇಯಾದರ್ಶಗಳು ಇರಲಿಲ್ಲ. ಅದು ವ‍ರ್ಷಕ್ಕೊಮ್ಮೆ ಸಭೆ ಸೇರಿ ನಾಗರಿಕ ಹಕ್ಕುಗಳು ಮತ್ತು ಸರಕಾರದಲ್ಲಿ ಸೇವೆ ಸಲ್ಲಿಸುವ ಅವಕಾಶಗಳಂತಹ ಹೆಚ್ಚು ವಿವಾದಾಸ್ಪದವಲ್ಲದ ಕೋರಿಕೆಗಳ ಬಗ್ಗೆ ಗೊತ್ತುವಳಿಗಳನ್ನು ಪಾಸು ಮಾಡುವ ಚರ್ಚಾವೇದಿಕೆಯಾಗಿಯೇ ಹೆಚ್ಚಾಗಿ ಕಾರ್ಯನಿರ್ವಹಿಸಿತು. ಈ ಗೊತ್ತುವಳಿಗಳನ್ನು ವೈಸ್‍ರಾಯ್ ಸರಕಾರಕ್ಕೆ ಮತ್ತು ಆಗಾಗ ಬ್ರಿಟಿಷ್ ಸಂಸತ್ತಿಗೆ ಸಲ್ಲಿಸಲಾಗುತ್ತಿತ್ತು. ಕಾಂಗ್ರೆಸಿನ ಆರಂಭದ ಸಾಧನೆಗಳು ಅತ್ಯಲ್ಪವಾಗಿದ್ದವು. ಇಡೀ ಭಾರತವನ್ನು ಪ್ರತಿನಿಧಿಸುವದಾಗಿ ಹೇಳಿಕೊಂಡರೂ ಕಾಂಗ್ರೆಸ್ಸು ನಗರಗಳ ಗಣ್ಯಜನರ ಹಿತಾಸಕ್ತಿಗಳಿಗೆ ದನಿಯಾಗಿತ್ತು. ಇತರ ಆರ್ಥಿಕ ಹಿನ್ನೆಲೆಗಳ ಜನರ ಸಂಖ್ಯೆ ಅತ್ಯಲ್ಪವಾಗಿತ್ತು.
೧೮೯೦ರಲ್ಲಿ ಕಾಂಗ್ರೆಸ್ ಅನ್ನು ಸೇರಿದ ಲೋಕಮಾನ್ಯ ಬಾಲಗಂಗಾಧರನಾಥ ತಿಲಕರು ಸೌಮ್ಯವಲ್ಲದ ಅಭಿಪ್ರಾಯಗಳನ್ನು ಹೊಂದಿದ್ದಾಗಿಯೂ, ಜನತೆಯಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರ ಸುಪ್ರಸಿದ್ಧ ಹೇಳಿಕೆ "ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ; ನಾನು ಅದನ್ನು ಪಡೆದೇ ತೀರುವೆನು" ಭಾರತೀಯರಿಗೆ ಸ್ಫೂರ್ತಿಯ ಮೂಲವಾಯಿತು. ಸಾಮಾನ್ಯ ಜನತೆಗೆ ತಮ್ಮ ಬಗ್ಗೆ ಅಭಿಮಾನಪಡಲು, ರಾಜಕೀಯ ಹಾಗೂ ಸಾಮಾಜಿಕ ಸ್ವಾತಂತ್ರ್ಯವನ್ನು ಅಧಿಕಾರಯುಕ್ತವಾಗಿ ಬೇಡಲು ತನ್ಮೂಲಕ ಸುಖವನ್ನು ಸಾಧಿಸಲು ಕಾರಣಗಳನ್ನು ಒದಗಿಸಿದ ಈ ವಿದ್ಯಾವಂತ ಜನರು ಜನತೆಯಲ್ಲಿ ಸ್ವಾತಂತ್ರ ಜ್ಯೋತಿಯ ಕಿಡಿಯನ್ನು ಹೊತ್ತಿಸಿದರು. ಇವರೊಂದಿಗೆ ಲಾಲ ಲಜಪತ್ ರಾಯ್ ಹಾಗು ಬಿಪಿನ್ ಚಂದ್ರ ಪಾಲ್ ಕೂಡ ಸ್ವಾತಂತ್ರ್ಯಕ್ಕೆ ಹಿಂಸಾತ್ಮಕ ಹೋರಾಟ ನಡೆಸುವ ಮಾರ್ಗವನ್ನು ಬೆಂಬಲಿಸಿದರು. ಸೌಮ್ಯವಾದಿಗಳಾದ ಗೋಪಾಲಕೃಷ್ಣ ಗೋಖಲೆ ಮತ್ತು ದಾದಾಭಾಯ್ ನೌರೋಜಿಗಳು ಮಾತುಕತೆ ಹಾಗು ರಾಜಕೀಯ ಒತ್ತಡಗಳನ್ನು ತರುವ ಮಾರ್ಗವನ್ನು ಬೆಂಬಲಿಸುತ್ತಿದ್ದರು. ಹೀಗೆ ಎರಡು ಬಣಗಳಾಗಿ ೧೯೦೭ರ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷ ಒಡೆಯಿತು.

ರಾಷ್ಟ್ರೀಯತಾವಾದದ ಬೆಳವಣಗೆ[ಬದಲಾಯಿಸಿ]

೧೯೦೦ ರ ಹೊತ್ತಿಗೆ ಕಾಂಗ್ರೆಸ್ಸು ಅಖಿಲ ಬಾರತ ಮಟ್ಟದ ಸಂಘಟನೆಯಾಗಿ ಹೊಮ್ಮಿತ್ತಾದರೂ , ಅದು ಮುಸ್ಲಿಮರನ್ನು ಆಕರ್ಷಿಸುವಲ್ಲಿನ ಸೋಲು ಅದರ ಸಾಧನೆಯನ್ನು ಕಳೆಗುಂದಿಸಿತ್ತು. ಮುಸ್ಲಿಮರು ಸರಕಾರೀ ಸೇವೆಯಲ್ಲಿ ತಮ್ಮ ಪ್ರಾತಿನಿಧ್ಯ ಸಾಕಷ್ಟಿಲ್ಲ ಎಂದು ಭಾವಿಸಿದ್ದರು. ಧಾರ್ಮಿಕ ಮತಾಂತರ , ಗೋಹತ್ಯೆ , ಅರೇಬಿಕ್ ಲಿಪಿಯಲ್ಲಿ ಉರ್ದುವನ್ನು ಉಳಿಸಿಕೊಳ್ಳುವುದು ಇವುಗಳ ವಿರುದ್ಧ ಹಿಂದೂ ಸಮಾಜ ಸುಧಾರಕರ ಪ್ರಚಾರಗಳು , ಕಾಂಗ್ರೆಸ್ಸು ಮಾತ್ರ ಭಾರತದ ಜನತೆಯನ್ನು ಪ್ರತಿನಿಧಿಸುವಂತಾದಾಗ ಅವರ ಅಲ್ಪಸಂಖ್ಯಾತ ಸ್ಥಿತಿ ಮತ್ತು ಹಕ್ಕುಗಳ ನಿರಾಕರಣೆಯ ಕುರಿತಾದ ಅವರ ಆತಂಕಗಳನ್ನು ಹೆಚ್ಚಿಸಿದವು . ಸರ್ ಸಯ್ಯದ್ ಅಹ್ಮದ್ ಖಾನ್ ಅವರು ಮುಸ್ಲಿಂ ಪುನರುಜ್ಜೀವನಕ್ಕಾಗಿ ಚಳುವಳಿಯೊಂದನ್ನು ಆರಂಬಿಸಿದರು . ಅದು ೧೮೭೫ ರಲ್ಲಿ ಉತ್ತರಪ್ರದೇಶದ ಆಲೀಗಢದಲ್ಲಿ ಮುಹಮ್ಮದನ್ ಆಂಗ್ಲೋ ಇಂಡಿಯನ್ ಕಾಲೇಜಿನ ಸ್ಥಾಪನೆಯಲ್ಲಿ ಪರ್ಯವಸಾನಗೊಂಡಿತು. (ನಂತರ ೧೯೨೧ ರಲ್ಲಿ ಅದು ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ ಎಂದು ಮರುಹೆಸರು ಪಡೆಯಿತು.) ಅದರ ಉದ್ದೇಶವು ಆಧುನಿಕ ಪಾಶ್ಚಾತ್ಯ ಜ್ಞಾನದೊಂದಿಗೆ ಇಸ್ಲಾಂನ ಸಾಮರಸ್ಯಕ್ಕೆ ಒತ್ತು ಕೊಡುವ ಶಿಕ್ಷಣವನ್ನು ಶ್ರೀಮಂತ ವಿದ್ಯಾರ್ಧಿಗಳಿಗೆ ನೀಡುವದಾಗಿತ್ತು . ಆದರೆ , ಭಾರತದ ಮುಸ್ಲಿಮರಲ್ಲಿನ ವೈವಿಧ್ಯತೆಯು ಏಕಪ್ರಕಾರದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪುನರುಜ್ಜೀವನವನ್ನು ಅಸಾಧ್ಯಗೊಳಿಸಿತು.

ವಂಗ ಭಂಗ[ಬದಲಾಯಿಸಿ]

ಮುಖ್ಯ ಲೇಖನ: ವಂಗ ಭಂಗ
೧೯೦೫ರಲ್ಲಿ, ವೈಸ್‍ರಾಯ್ ಹಾಗೂ ಗವರ್ನರ್ ಜನರಲ್ (೧೮೯೯-೧೯೦೫) ಆಗಿದ್ದ ಲಾರ್ಡ್ ಕರ್ಝನ್, ವಂಗದೇಶ ಅಥವಾ ಬಂಗಾಳ ಪ್ರಾಂತ್ಯವನ್ನು ಆಡಳಿತಾತ್ಮಕ ಸುಧಾರಣೆಗೋಸ್ಕರ ಚಿಕ್ಕ ಪ್ರದೇಶಗಳನ್ನಾಗಿ ಒಡೆಯಬೇಕೆಂದು ಆದೇಶಿಸಿದನು. ದೊಡ್ಡದಾದ ವಂಗದೇಶದಲ್ಲಿನ ಭಾರೀಜನಸಂಖ್ಯೆ, ಅಲ್ಲಿನ ಬುದ್ಧಿಜೀವಿ ಹಿಂದೂಗಳ ಪ್ರಭಾವ, ರಾಷ್ಟ್ರ ಹಾಗೂ ಪ್ರಾಂತೀಯ ರಾಜಕಾರಣದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದ್ದುದೇ ಇದಕ್ಕೆ ಕಾರಣ. ವಂಗ ಭಂಗ ಎರಡು ಪ್ರದೇಶಗಳನ್ನು ಸೃಷ್ಟಿಸಿತು - ಢಾಕಾವನ್ನು ರಾಜಧಾನಿಯಾಗಿ ಪಡೆದ ಅಸ್ಸಾಂ ಹಾಗೂ ಪೂರ್ವ ಬಂಗಾಳ ಮತ್ತು (ಮೊದಲೇ ಆಂಗ್ಲ ಭಾರತದ ರಾಜಧಾನಿಯಾಗಿದ್ದ) ಕಲ್ಕತ್ತಾವನ್ನು ರಾಜಧಾನಿಯಾಗಿ ಪಡೆದ ಪಶ್ಚಿಮ ಬಂಗಾಳ. ಹಿಂದು-ಮುಂದು ನೋಡದೆ, ವಿಚಾರಮಾಡದೆ ಅತಿ ಬೇಗನೆ ಮಾಡಲ್ಪಟ್ಟ ವಂಗ ಭಂಗದಿಂದ ಬಂಗಾಳರು ರೊಚ್ಚಿಗೆದ್ದರು. ಸರ್ಕಾರ ಭಾರತೀಯರ ಒಪ್ಪಿಗೆಯಿರಲಿ, ಅಭಿಪ್ರಾಯವನ್ನೂ ಕೇಳಿರಲಿಲ್ಲವಾದ್ದರಿಂದ ಇದು ಎಂದಿನಂತೆ ಆಂಗ್ಲರ ಒಡೆದು ಆಳುವ ಕುತಂತ್ರವೇ ಎಂದು ಎಲ್ಲರಿಗೆ ತಿಳಿಯಿತು. ಚಳುವಳಿಗಳು ಬೀದಿಗಿಳಿದವು; ಪತ್ರಿಕೆಗಳು ಅವನ್ನು ದೇಶಕ್ಕೆಲ್ಲ ಹರಡಿದವು. ಕೊನೆಗೆ ಕಾಂಗ್ರೆಸ್ ಸ್ವದೇಶೀ ಕೂಗೆಬ್ಬಿಸಿ, ಬ್ರಿಟಿಷರ ಪದಾರ್ಥಗಳಿಗೆ ನಿರ್ಬಂಧವನ್ನು ಘೋಷಿಸಿತು. ಈ ಕಾಲದಲ್ಲಿ ಕವಿರವೀಂದ್ರನಾಥ ಟಾಗೋರ್ ("ಪುನೀತವದು ವಂಗದ ನೆಲ, ವಂಗದ ಜಲ...." ಎಂಬರ್ಥ ಬರುವ) ಗೀತೆಯನ್ನು ರಚಿಸಿ ಹಾಡುತ್ತಾ, ಪರಸ್ಪರ ಕೈಗಳಿಗೆ ರಾಖೀಯನ್ನು ಕಟ್ಟಿಸುತ್ತಾ ಜನರನ್ನು ಮುನ್ನಡೆಸಿದರು. ಆ ದಿನ (ಅರಂಧನ್) ವಂಗದ ಮನೆಗಳಲ್ಲಿ ಯಾರೂ ಒಲೆ ಹೊತ್ತಿಸಲಿಲ್ಲ.
ಕಾಂಗ್ರೆಸ್ ನೇತೃತ್ವದ ಬ್ರಿಟಿಷ್ ವಸ್ತುಗಳ ಬಹಿಷ್ಕಾರ ಎಷ್ಟು ಸಫಲವಾಯಿತೆಂದರೆ ಸಿಪಾಯಿದಂಗೆಯ ನಂತರ ಅತಿ ದೊಡ್ಡದೆಂಬಂಥ ಆಂಗ್ಲ ವಿರೋಧೀ ಎಲ್ಲ ಶಕ್ತಿಗಳನ್ನೂ ಒಮ್ಮೆಲೇ ಅದು ಆಂಗ್ಲರ ಮೇಲೆ ತೂರಿಬಿಟ್ಟಂತಾಯಿತು. ಮತ್ತೆ ಹಿಂಸೆ ಹಾಗೂ ದಮನದ ಚಕ್ರ ದೇಶದ ಅಲ್ಲಲ್ಲಿ ತಲೆದೋರಿತು (ನೋಡಿ:ಅಲಿಪುರದ ಸ್ಫೋಟ). ೧೯೦೯ ರಲ್ಲಿ, ಆಂಗ್ಲರು ವಿವಿಧ ಸಾಂವಿಧಾನಿಕ ಸುಧಾರಣೆಗಳ ಮೂಲಕ ತಲೆಸವರುವ ಪ್ರಯತ್ನಗಳನ್ನೆಲ್ಲಾ ಮಾಡಿದರು ಮತ್ತು ಕೆಲವು ನಿರ್ವಾಹಕರುಗಳನ್ನು ಪ್ರಾಂತೀಯ ಹಾಗೂ ಸಾರ್ವಭೌಮ ಸಭೆಗಳಿಗೆ ನಿಯೋಜಿಸಿದರು. ಮುಸ್ಲಿಮರ ಒಂದು ನಿಯೋಗ ವೈಸ್‍ರಾಯ್ ಲಾರ್ಡ್ ಮಿಂಟೋ (೧೯೦೫-೧೦) ಅನ್ನು ಭೇಟಿಯಾಗಿ, ಮುಂದಾಗಲಿರುವ ಸಾಂವಿಧಾನಿಕ ಸುಧಾರಣೆಗಳಲ್ಲಿ ಮುಸ್ಲಿಮರಿಗೆ ಕೆಲವು ಅನುಕೂಲಗಳನ್ನೂ, ಸರ್ಕಾರೀ ಸೇವೆ ಹಾಗೂ ಮತದಾರಪಟ್ಟಿಯಲ್ಲಿ ವಿಶೇಷ ಸೌಲಭ್ಯಗಳನ್ನೂ ಕೋರಿತು. ಅದೇ ವರ್ಷ, ತಾವು ಬ್ರಿಟಿಷರಿಗೆ ವಿಧೇಯರೆಂದು ತೋರಿಸಲು ಹಾಗೂ ತಮ್ಮ ರಾಜಕೀಯ ಅಧಿಕಾರವನ್ನು ಮುನ್ನುಗ್ಗಿಸಲು ಮುಸ್ಲಿಂ ಲೀಗ್ ಸ್ಥಾಪನೆಯಾಯಿತು; ಅದನ್ನು ಒಪ್ಪಿ ಬ್ರಿಟಿಷರು ಮುಸ್ಲಿಮರಿಗೆ ಹಲವು ಪ್ರಾತಿನಿಧ್ಯಗಳನ್ನು ಕಾದಿರಿಸಲು ೧೯೦೯ ರ ಭಾರತ ಪ್ರತಿನಿಧಿ ಸಭಾ ಕಾಯ್ದೆಯಡಿ ಮಂಡಿಸಿದ್ದೂ ಆಯಿತು. ಹಿಂದೂಗಳೇ ಹೆಚ್ಚಿದ್ದ ಕಾಂಗ್ರೆಸ್ ನಿಂದ ತನ್ನನ್ನು ಬೇರೆಯಾಗಿ ಗುರುತಿಸಬೇಕೆಂದೂ, ತನ್ನ ಉದ್ದೇಶ "ರಾಷ್ಟ್ರದೊಳಗಣ ರಾಷ್ಟ್ರ" ಎಂದೂ ಹೇಳತೊಡಗಿತು.
ಸಾಲದ್ದಕ್ಕೆ, ೧೯೧೧ ರಲ್ಲಿ ಸಾರ್ವಭೌಮ ದೊರೆ ಐದನೇ ಜಾರ್ಜ್ ಭಾರತಕ್ಕೆ ದರ್ಬಾರ್‍(ಅರಸನಿಗೆ ಪ್ರಜೆಗಳೆಲ್ಲರ ಅಧೀನತೆಯನ್ನು ತೋರ್ಪಡಿಸಲು ನಡೆಸುವ ಪರಂಪರಾನುಗತ ಒಡ್ಡೋಲಗ) ನಡೆಸಲು ಬಂದಾಗ ವಂಗ-ಭಂಗವನ್ನು ಅನೂರ್ಜಿತಗೊಳಿಸಿ, ರಾಜಧಾನಿಯನ್ನು ಕಲ್ಕತ್ತಾದಿಂದ, ಹೊಸದಾಗಿ ನಿರ್ಮಿಸಲ್ಪಡುವ ದೆಹಲಿಯ ದಕ್ಷಿಣಭಾಗದ ನಗರವೊಂದಕ್ಕೆ ಸ್ಥಳಾಂತರಿಸುವುದಾಗಿ ಘೋಷಿಸಿದ್ದು, ತಮ್ಮ ಮಹತ್ಕಾರ್ಯವೆಂದು ಬ್ರಿಟಿಷರೇ ಬೆನ್ನುತಟ್ಟಿಕೊಂಡು ಹಿಗ್ಗಿದ್ದೂ ಆಯಿತು. ಮುಂದೆ ಅದೇ ನಗರ ನವದೆಹಲಿಯಾಯಿತು.

ಮೊದಲನೇ ವಿಶ್ವಯುದ್ಧ[ಬದಲಾಯಿಸಿ]

ಮೊದಲನೇ ವಿಶ್ವಯುದ್ಧದ ಪ್ರಾರಂಭದಿಂದಲೂ ಭಾರತೀಯರು ತಮ್ಮ ಬೆಂಬಲವನ್ನು ವಸಾಹತುಶಾಹಿ ಸರ್ಕಾರಕ್ಕೆ ನೀಡಿದರು. ಈ ಸಮಯದಲ್ಲಿ ದಂಗೆಯನ್ನು ನಿರೀಕ್ಷಿಸಿದ್ದ ಬ್ರಿಟೀಶರಿಗೆ ಇದು ಆಶ್ಚರ್ಯಕರವಾಗಿತ್ತು. ಸುಮಾರು ೧.೩ಮಿಲಿಯ ಭಾರತೀಯ ಸೈನಿಕರು ಮತ್ತು ಕೂಲಿಕಾರರು ಯೂರೋಪ್ಆಫ್ರಿಕ ಮತ್ತು ಮಧ್ಯ ಏಷ್ಯಾಗಳಲ್ಲಿ ಸೇವೆ ಸಲ್ಲಿಸಿದರು. ಹಲವಾರ ಭಾರತದ ರಾಜರು ಹಣ, ಆಹಾರ ಮತ್ತು ಮದ್ದು-ಗುಂಡುಗಳನ್ನೂ ಪೂರೈಸಿದರು. ಆದರೆ ಏರಿದ ಯುದ್ಧ ಮೃತರ ಸಂಖ್ಯೆ, ಅತೀವ ಕರಭಾರದಿಂದ ಉಂಟಾದ ಹಣದುಬ್ಬರಸಾಂಕ್ರಾಮಿಕ ಶೀತಜ್ವರದಿಂದ ಭಾರತದಲ್ಲಿ ಜೀವನ ಕಷ್ಟವಾಗುತ್ತಿತ್ತು. ಕಾಂಗ್ರೆಸ್ಸಿನ ಸೌಮ್ಯವಾದಿಗಳು ಮತ್ತು ಉಗ್ರವಾದಿಗಳು ಒಟ್ಟಾಗಿ ೧೯೧೬ರಲ್ಲಿ ಲಕ್ನೌ ಒಪ್ಪಂದಕ್ಕೆ ರಾಜಿಯಾದರು. ಇದರಡಿಯಲ್ಲಿ ಮುಸ್ಲಿಂ ಲೀಗ್ನೊಂದಿಗೆ ರಾಜಕೀಯ ಅಧಿಕಾರ ಹಂಚಿಕೆ ಹಾಗು ಭಾರತದಲ್ಲಿ ಇಸ್ಲಾಂ ಧರ್ಮದ ಸ್ಥಾನಗಳ ಬಗ್ಗೆ ತಾತ್ಕಾಲಿಕ ಒಪ್ಪಂದವೂ ಸೇರಿತ್ತು.
ಯುದ್ಧದ ಸಮಯದಲ್ಲಿ ಭಾರತವು ನೀಡಿದ ಬೆಂಬಲವನ್ನು ಗುರುತಿಸಿ ಮತ್ತು ನವೀಕರಿಸಿದ ರಾಷ್ಟ್ರೀಯ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಬ್ರಿಟಿಷರು "ದಾನ ಮತ್ತು ದಂಡ" ನೀತಿಯನ್ನು ಅನುಸರಿಸಿದರು . ಅಗಸ್ಟ್ ೧೯೧೭ ರಲ್ಲಿ ಭಾರತಕ್ಕೆ ಸಂಬಂಧಪಟ್ಟ ಕಾರ್ಯದರ್ಶಿಯಾದ ( the secretary of state for India) ಎಡ್ವಿನ್ ಮಾಂಟೆಗ್ಯೂ ರವರು ಪಾರ್ಲಿಮೆಂಟಿನಲ್ಲಿ "ಬ್ರಿಟಿಷ್ ಸಾಮ್ರಾಜ್ಯದ ಅಭಿನ್ನ ಅಂಗವಾಗಿ ಜವಾಬ್ದಾರಿ ಆಡಳಿತವನ್ನು ಕ್ರಮೇಣ ಸಾಕಾರಗೊಳಿಸುವ ದೃಷ್ಟಿಯಿಂದ ಆಡಳಿತದ ಪ್ರತಿಯೊಂದು ವಿಭಾಗದಲ್ಲಿ ಭಾರತೀಯರೊಂದಿಗಿನ ಪಾಲುಗಾರಿಕೆಯನ್ನು ಹೆಚ್ಚಿಸುವದು ಮತ್ತು ಸ್ವ-ಆಡಳಿತದ ಸಂಸ್ಥೆಗಳನ್ನು ಕ್ರಮೇಣ ಅಭಿವೃದ್ಧಿಪಡಿಸುವದು ಭಾರತದಲ್ಲಿ ಬ್ರಿಟಿಷ್ ನೀತಿಯಾಗಿದೆ" ಎಂದು ಐತಿಹಾಸಿಕ ಘೋಷಣೆಯನ್ನು ಮಾಡಿದರು . ನಂತರ ೧೯೧೯ ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಉದ್ದೇಶಿತ ಗುರಿಗಳನ್ನು ಸಾಧಿಸುವ ಕ್ರಮಗಳನ್ನು ಒಳಗೊಂಡಿತು. ಅದು ಆಡಳಿತದಲ್ಲಿ ಇಬ್ಬಗೆಯ ವಿಧಾನ ಅಥವಾ ದ್ವಿ-ಆಡಳಿತ ಪದ್ಧತಿಯನ್ನು ಪರಿಚಯಿಸಿತು. ಅದರಲ್ಲಿ ಜನರಿಂದ ಆಯ್ಕೆಯಾದ ಭಾರತೀಯ ವಿಧಾಯಕ ಸದಸ್ಯರೂ ಸರಕಾರದಿಂದ ನೇಮಿಸಲ್ಪಟ್ಟ ಬ್ರಿಟಿಷ್ ಅಧಿಕಾರಿಗಳೂ ಅಧಿಕಾರವನ್ನು ಹಂಚಿಕೊಳ್ಳಲಿದ್ದರು. ಈ ಕಾನೂನು ಕೇಂದ್ರ ಮತ್ತು ಪ್ರಾಂತೀಯ ಸಭೆಗಳನ್ನು ವಿಸ್ತರಿಸಿತು ಮತ್ತು ಹೆಚ್ಚು ಜನರಿಗೆ ಮತಾಧಿಕಾರ ನೀಡಿತು. ದ್ವಿ-ಆಡಳಿತ ಪದ್ಧತಿಯು ಪ್ರಾಂತೀಯ ಮಟ್ಟದಲ್ಲಿ ಕೆಲವು ನೈಜ ಬದಲಾವಣೆಗಳನ್ನು ಜಾರಿಗೊಳಿಸಿತು :ಕೃಷಿ , ಸ್ಥಳೀಯ ಆಡಳಿತ , ಆರೋಗ್ಯಶಿಕ್ಷಣ ಮತ್ತು ಲೋಕೋಪಯೋಗಿ ಇಲಾಖೆಗಳಂತಹ ಅನೇಕ ವಿವಾದಾಸ್ಪದವಲ್ಲದ ಖಾತೆಗಳನ್ನು ಭಾರತೀಯರ ಕೈಗೊಪ್ಪಿಸಲಾಯಿತು, ಆದರೆ ಅದೇ ಸಮಯಕ್ಕೆ ಹಣಕಾಸು , ತೆರಿಗೆ ಮತ್ತು ಕಾನೂನು-ಸುವ್ಯವಸ್ಥೆಗಳಂತಹ ಸೂಕ್ಷ್ಮ ವಿಷಯಗಳನ್ನು ಪ್ರಾಂತೀಯ ಬ್ರಿಟಿಶ್ ಆಡಳಿತಗಾರರು ಉಳಿಸಿಕೊಂಡರು.

ರೌಲತ್ ಕಾಯ್ದೆ ಹಾಗೂ ನಂತರದ ಬೆಳವಣಿಗೆ[ಬದಲಾಯಿಸಿ]

ಮುಖ್ಯ ಲೇಖನ: ಅಸಹಕಾರ ಚಳುವಳಿ
ಸುಧಾರಣೆಯ ಧನಾತ್ಮಕ ಬೆಳವಣಿಗೆಯನ್ನು ೧೯೧೯ ರಲ್ಲಿ ರೌಲತ್ ಕಾಯ್ದೆ ಹದಗೆಡಿಸಿತು . "ರಾಜದ್ರೋಹಾತ್ಮಕ ಒಳಸಂಚಿ"ನ ವಿಚಾರಣೆಗೆ ನೇಮಕವಾದ ರೌಲಟ್ ಆಯೋಗವು ಹಿಂದಿನ ವರ್ಷ ಸಾಮ್ರಾಜ್ಯದ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ಮಾಡಿದ ಶಿಫಾರಸುಗಳನ್ನು ಇದು ಒಳಗೊಂಡಿದ್ದು ಅದೇ ಹೆಸರನ್ನು ಈ ಕಾಯ್ದೆಗೆ ಕೊಡಲಾಗಿತ್ತು. ಕರಾಳ ಕಾಯ್ದೆ ಎಂದೂ ಹೆಸರಾದ ಈ ಕಾಯ್ದೆಯು ರಾಜಗ್ರೋಹವನ್ನು ಬಗ್ಗು ಬಡಿಯುವದಕ್ಕಾಗಿ ಪತ್ರಿಕಾರಂಗವನ್ನು ತೆಪ್ಪಗಾಗಿಸುವದು, ರಾಜಕೀಯ ಕಾರ್ಯಕರ್ತರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡುವದು , ರಾಜದ್ರೋಹದ ಸಂಶಯಕ್ಕೊಳಗಾದ ಯಾವುದೇ ವ್ಯಕ್ತಿಯನ್ನು ವಾರಂಟಿಲ್ಲದೆ ಬಂಧಿಸುವದು ಇಂಥ ವಿಶೇಷಾಧಿಕಾರಗಳನ್ನು ವೈಸ್‍ರಾಯ್‍ಗೆ ನೀಡಿತು. ಇದನ್ನು ವಿರೋಧಿಸಿ ರಾಷ್ಟ್ರೀಯ ಹರತಾಳಕ್ಕೆ ಕರೆಕೊಡಲಾಯಿತು . ಇದು ದೇಶಾದ್ಯಂತವಲ್ಲವಾದರೂ, ಸಾಕಷ್ಟು ವ್ಯಾಪಕವಾದ ಜನರ ಅಸಹನೆಯ ಪ್ರಾರಂಭದ ಕುರುಹಾಗಿತ್ತು.
ಈ ಕಾಯ್ದೆಗಳಿಂದ ಆದ ಚಳುವಳಿಗಳು ೧೩ ಏಪ್ರಿಲ್ ೧೯೧೯ ರಂದು ಪಂಜಾಬಿನ ಅಮೃತಸರದಲ್ಲಿ ಅಮೃತಸರದ ನರಮೇಧ ( ಜಲಿಯನ್‍ವಾಲಾಬಾಗ್ ನರಮೇಧ ಎಂದೂ ಇದು ಹೆಸರಾಗಿದೆ) ದಲ್ಲಿ ಪರ್ಯವಸಾನವಾಯಿತು. ಬ್ರಿಟಿಷ್ ಸೈನ್ಯದ ಕಮಾಂಡರ್ ಆದ , ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಡೈಯರ್ ನು ತನ್ನ ಸೈನಿಕರಿಗೆ ಸುಮಾರು ಹತ್ತು ಸಾವಿರದಷ್ಟಿದ್ದ ನಿಶ್ಶಸ್ತ್ರ ಮತ್ತು ಅಮಾಯಕ ಜನರ ಗುಂಪಿನ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ. ಅವರು ಮಾರ್ಶಲ್ ಲಾ ಜಾರಿಯಾಗಿರುವ ಸಂಗತಿ ತಿಳಿಯದೆ, ಗೋಡೆಗಳಿಂದ ಆವೃತವಾದ ಜಾಲಿಯನ್‍ವಾಲಾ ಬಾಗ್ ಎಂಬ ತೋಟದಲ್ಲಿ ಸಿಖ್ ಹಬ್ಬವಾದ ಬೈಶಾಖಿಯನ್ನು ಆಚರಿಸಲು ಸಭೆಸೇರಿದ್ದರು. ಈ ಘಟನೆಯಲ್ಲಿ ಒಟ್ಟು ೧,೬೫೦ ಸುತ್ತು ಗುಂಡುಗಳನ್ನು ಹಾರಿಸಲಾಯಿತು; ೭೩೯ ಜನರು ಸತ್ತರು; ೧,೧೩೭ ಜನರು ಗಾಯಗೊಂಡರು. ಈ ಘಟನೆಯು ಯುದ್ಧಸಮಯದ ಸ್ವ-ಆಡಳಿತದ ಮತ್ತು ಸದ್ಭಾವನೆಯ ಆಶಯಗಳನ್ನು ಯುದ್ಧಾನಂತರದ ಉನ್ಮಾದಕರ ಪ್ರತಿಕ್ರಿಯೆಯಾಗಿ ಭಗ್ನಗೊಳಿಸಿತು.

ಗಾಂಧಿಯ ಉದಯ[ಬದಲಾಯಿಸಿ]

ಮುಖ್ಯ ಲೇಖನ: ಮಹಾತ್ಮಾ ಗಾಂಧಿ
ಭಾರತವು ಸ್ವರಾಜ್ಯ (ಸ್ವಯಂ ಆಡಳಿತ , ಕೆಲವೊಮ್ಮೆ ಹೋಂ-ರೂಲ್ ಎಂದೂ, ಸ್ವಾತಂತ್ರ್ಯ ಎಂದೂ ಅನುವಾದಿಸಲಾಗುತ್ತದೆ) ವನ್ನು ಗಳಿಸುವಲ್ಲಿ ಸಂಪೂರ್ಣವಾಗಿ ತನ್ನದೇ ಆದ ಮಾರ್ಗದ ಆಯ್ಕೆಗೆ ಬಹುಮಟ್ಟಿಗೆ ಮಹಾತ್ಮಾ ಗಾಂಧಿ ( ಮಹಾತ್ಮಾ ಎಂದರೆ ಮಹಾನ್ ಆತ್ಮವುಳ್ಳವನು ಎಂದರ್ಥ) ಯವರು ಕಾರಣ. ಗುಜರಾತಿನ ನಿವಾಸಿಯಾದ ಅವರು ಯುನೈಟೆಡ್ ಕಿಂಗ್‍ಡಂ ನಲ್ಲಿ ಶಿಕ್ಷಣ ಪಡೆದರು. ಅವರು ಕಡಿಮೆ ಕಕ್ಷಿಗಾರರನ್ನು ಹೊಂದಿದ್ದ ಹಿಂಜರಿಕೆ ಸ್ವಭಾವದ ವಕೀಲರಾಗಿದ್ದರು. ಬಹುಬೇಗನೆ ಅವರು ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಸಮಾಜದ ಪರವಾಗಿ ನ್ಯಾಯಬದ್ಧ ಕಾರಣಗಳಿಗಾಗಿ ಹೋರಾಟವನ್ನು ಕೈಗೆತ್ತಿಕೊಂಡುದರಿಂದ ಅವರ ವಕೀಲಿ ವೃತ್ತಿಯು ಅತಿ ಕಡಿಮೆ ಅವಧಿಯದ್ದಾಗಿತ್ತು. ೧೮೯೩ರಲ್ಲಿ ಗಾಂಧಿ ದಕ್ಷಿಣ ಆಫ್ರಿಕೆಯಲ್ಲಿ ಒಪ್ಪಂದಕ್ಕೊಳಪಟ್ಟು ಕೆಲಸಮಾಡುವ ಭಾರತೀಯ ಕಾರ್ಮಿಕರನ್ನು ಪ್ರತಿನಿಧಿಸಲು ಬಂದ ಆಹ್ವಾನವನ್ನು ಒಪ್ಪಿಕೊಂಡರು. ಅಲ್ಲಿ ಅವರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜನಾಂಗೀಯ ಪಕ್ಷಪಾತ ವನ್ನು ವಿರೋಧಿಸುತ್ತ ವಾಸ ಮಾಡಿದರು. ಗಾಂಧಿಯವರ ಹೋರಾಟವು ಕೇವಲ ಮೂಲಭೂತ ಪಕ್ಷಪಾತ ಮತ್ತು ಕಾರ್ಮಿಕರ ಜತೆ ದುರ್ವ್ಯವಹಾರಗಳ ವಿರುದ್ಧ ಅಷ್ಟೇ ಆಗಿರದೆ ರೌಲತ್ ಕಾಯ್ದೆಗಳಂತಹ ದಮನಕಾರೀ ಪೋಲೀಸು ಕ್ರಮಗಳ ವಿರುದ್ಧವೂ ಆಗಿತ್ತು. ಅನೇಕ ತಿಂಗಳುಗಳ ಅಹಿಂಸಾತ್ಮಕ ಪ್ರತಿಭಟನೆ ಮತ್ತು ಸಾವಿರಾರು ಕರಾರುಕೂಲಿಗಳ ಬಂಧನದ ನಂತರ ದಕ್ಷಿಣ ಆಫ್ರಿಕೆಯ ಆಡಳಿತಗಾರನಾದ ಜನರಲ್ ಜನ್ ಸ್ಮಟ್ಸ್ ನು ಎಲ್ಲ ಕೈದಿಗಳನ್ನು ಬಿಡುಗಡೆ ಮಾಡಿ ದಮನಕಾರಿ ಕಾನೂನನ್ನು ರದ್ದು ಮಾಡಿದನು. ಇದು ಪುಕ್ಕಲುತನವನ್ನು ಒದ್ದೋಡಿಸಿ, ಧೈರ್ಯವನ್ನು ತುಂಬಿದ ಘಟನೆಯಾಗಿ ಪರಿಣಮಿಸಿ, ಈ ಯುವ ಭಾರತೀಯನಲ್ಲಿ ಕ್ರಾಂತಿಕಲೆಯ ರಕ್ತವನ್ನೂ ಮುಂದೆ ಮಹಾನ್ ಎಂದು ವಿಖ್ಯಾತವಾಗುವ ಆತ್ಮವನ್ನೂ ತುಂಬಿತು. ಈತನ ದಕ್ಷಿಣ ಆಫ್ರಿಕಾದ ಈ ವಿಜಯ, ತಾಯ್ನಾಡಿನ ಜನಗಳಲ್ಲಿ ಸಂತಸ ತುಂಬಿತು.
೧೯೧೫ರಲ್ಲಿ ಭಾರತಕ್ಕೆ ಹಿಂದಿರುಗಿದ ಈತ ಜನಕ್ಕೆ ಅಪರಿಚಿತನಾದರೂ, ದೇಶಭಕ್ತಿಯ ನವಭಾರತದ ಕನಸೊಂದನ್ನು ಕಟ್ಟಿಕೊಂಡಿದ್ದರು. ಆದರೆ, ಇಲ್ಲಿ ಗಮನಿಸತಕ್ಕ ವಿಷಯವೆಂದರೆ ಗಾಂಧಿಯವರು ಭಾರತದ ಜನತೆಯ ಸಮಸ್ಯೆಗಳಿಗೆ ಬ್ರಿಟಿಷ್ ಸಾಮ್ರಾಜ್ಯದಿಂದ ರಾಜಕೀಯ ಸ್ವಾತಂತ್ರ್ಯವೊಂದೇ ಉತ್ತರ ಎಂದು ಇನ್ನೂ ನಂಬಿರಲಿಲ್ಲ. ಹಿಂದಿರುಗಿದ ನಂತರ, ಸಾಮ್ರಾಜ್ಯದ ಪ್ರಜೆಯಾಗಿ, ಸ್ವಾತಂತ್ರ್ಯ ಹಾಗೂ ರಕ್ಷಣೆಯನ್ನು ಬಯಸುವವನು ದ್ವಿತೀಯ ವಿಶ್ವಯುದ್ಧದಲ್ಲಿ ಸಾಮ್ರಾಜ್ಯದ ರಕ್ಷಣೆಯಲ್ಲಿ ಭಾಗವಹಿಸದೆ ಇರುವುದು ಸರಿಯಲ್ಲ ಎಂದು ನೇರವಾಗಿಯೇ ಹೇಳಿದ್ದರು.
ಕಾಂಗ್ರೆಸ್ ಧುರೀಣರೂ ಹಿರಿಯ ನಾಯಕರೂ ಆಗಿದ್ದ ಗೋಪಾಲಕೃಷ್ಣ ಗೋಖಲೆಯವರು ಗಾಂಧಿಯವರ ಗುರುವಾದ ನಂತರ ಗಾಂಧಿಯವರು ವರ್ಷಗಟ್ಟಲೆ ದೇಶದ ಉದ್ದಗಲಕ್ಕೂ ಸಂಚರಿಸಿ, ಭಾರತದ ರಾಜ್ಯ-ನಗರ-ಹಳ್ಳಿಗಳೆಲ್ಲವನ್ನೂ ಸುತ್ತುತ್ತಾ ದೇಶದ ಹಾಗೂ ಜನರ ಸಂಸ್ಕೃತಿ, ರೀತಿ-ನೀತಿ, ಅವರ ಕುಂದು-ಕೊರತೆಗಳ ಬಗ್ಗೆ ತಿಳಿಯಲಾರಂಭಿಸಿದರು. ಗಾಂಧಿಯವರ ಅಹಿಂಸಾತ್ಮಕ ನಾಗರಿಕ ಅಸಹಕಾರದ ತತ್ವಾದರ್ಶಗಳು ಮೊದಮೊದಲು ಕೆಲ ಭಾರತೀಯರಿಗೆ ಹಾಗೂ ಧೀಮಂತ ಕಾಂಗ್ರೆಸ್ ನಾಯಕರಿಗೆ ಅಪ್ರಾಯೋಗಿಕವೆನಿಸಿದವು. ಗಾಂಧಿಯವರ ಮಾತಿನಲ್ಲೇ ಹೇಳುವುದಾದರೆ, "ನಾಗರಿಕ ಅಸಹಕಾರವೆಂದರೆ ಅನೈತಿಕ ಶಾಸನಾದೇಶಗಳ ಸಭ್ಯ ಖಂಡನೆ". ಆದರೆ ಅವರ ಯೋಚನೆಯಂತೆಯೇ ಅದನ್ನು ಅಹಿಂಸಾತ್ಮಕವಾಗಿ ಪಾಲಿಸಲು, ಭ್ರಷ್ಟ ಆಡಳಿತಕ್ಕೆ ಕೊಟ್ಟ ಸಹಕಾರವನ್ನು ಹಿಂಪಡೆಯಬೇಕಿತ್ತು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವಲ್ಲಿ ಗಾಂಧಿಯವರು ಸಫಲರಾಗಿದ್ದು ರೌಲತ್ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ನಡೆಸಿದ ಸತ್ಯಾಗ್ರಹಚಳುವಳಿಯ ಮೂಲಕ.
ಬಿಹಾರದ ಚಂಪಾರಣ್ಯದಲ್ಲಿ, ಕರಭಾರದಿಂದ ತತ್ತರಿಸುತ್ತಿದ್ದ ಕಡುಬಡವರಾದ ಬೇಸಾಯಗಾರರ, ತಿನ್ನುವ ಧಾನ್ಯವನ್ನೇ ಮಾರಿ ವಾಣಿಜ್ಯ ಬೆಳೆ ತೆಗೆಯಲು ಒತ್ತಾಯಕ್ಕೊಳಗಾದ ಭೂಮಿಯಿಲ್ಲದ ರೈತರ, ತಿನ್ನಲೂ ಸಾಲದಷ್ಟು ಸಂಬಳ ಪಡೆಯುತ್ತಿದ್ದವರ ಪರವಾಗಿ ಗಾಂಧಿ ನಿಂತರು. ಈ ಹೊತ್ತಿಗಾಗಲೇ ಭಾರತದ ಮೈಯನ್ನು ಮುಚ್ಚುತ್ತಿದ್ದ ಐರೋಪ್ಯ ಬಟ್ಟೆಗಳನ್ನವರು ಕಿತ್ತೆಸೆದು, ನಾಡು ನೇಯ್ಗೆಯ ಖಾದಿ ಧೋತ್ರಗಳನ್ನೂ ಹಾಗೂ ಮೇಲುಹೊದಿಕೆಯನ್ನೂ ಧರಿಸಲಾರಂಭಿಸಿದ್ದರು. ಈ ಅಂಕಣದ ಮೇಲ್ಭಾಗದಲ್ಲಿರುವ ಚಿತ್ರವೂ ಸೇರಿದಂತೆ ಅವರ ಪ್ರಖ್ಯಾತ ಚಿತ್ರಪಟಗಳಲ್ಲಿ ಇದನ್ನು ನಾವು ಕಾಣಬಹುದು.
ಈ ಸರಳ ಗಾಂಧಿ, ಕಣ್ಣಿಗೆ ಬೀಳುತ್ತಲೇ ಲಕ್ಷಾಂತರ ಬಡ ಶ್ರೀಸಾಮಾನ್ಯರಲ್ಲಿ ಮಿಂಚನ್ನು ಹಾಯಿಸುವಂತಾದರು. ವಿದೇಶದಲ್ಲಿ ಕಲಿತು ಹಿಂದಿರುಗಿದ ಇತರೆ ಬಿಂಕ ಕೊಂಕಿನ ದೊಡ್ಡ ಮನುಷ್ಯರಂತಾಗದೇ, ಅವರೊಳಗೊಬ್ಬರಾದರು. ಹೋದಲ್ಲೆಲ್ಲ ಗುಂಪುಗುಂಪಾಗಿ ಜನಸಾಮಾನ್ಯರನ್ನು ಸೆಳೆಯುತ್ತಿದ್ದ ಗಾಂಧಿಯವರನ್ನು ಪೋಲೀಸರು ಬಂಧಿಸಿದಾಗ, ರಾಜ್ಯದೆಲ್ಲೆಡೆ ತೀವ್ರ ಪ್ರತಿಭಟನೆಗಳು ಪ್ರಾರಂಭವಾದವು! ಅವರಿಗಿರುವ ಜನಸ್ತೋಮದ ಬೆಂಬಲಕ್ಕೆ ಬೆಬ್ಬಳಿಸಿದ ಬ್ರಿಟಿಷ್ ಆಡಳಿತ ಕಂಗೆಟ್ಟು ಅವರನ್ನು ಬಿಡುಗಡೆ ಮಾಡಲೇಬೇಕಾಯಿತು. ಅಲ್ಲದೆ, ರೈತರ ಆಯ್ಕೆಯ ಬೆಳೆಯನ್ನು ಬೆಳೆವ ಹಕ್ಕು, ಬೆಳೆದ ವಾಣೀಜ್ಯ ಬೆಳೆಗೆ ತಕ್ಕ ಬೆಲೆ ಮತ್ತು ಕ್ಷಾಮದಲ್ಲಿರುವಾಗ ಕರವಿಮುಕ್ತಿ ನೀಡಲೇಬೇಕೆಂಬ ಗಾಂಧಿಯವರ ಹಾಗೂ ಬಿಹಾರದ ರೈತರ ಬೇಡಿಕೆಗಳಿಗೆ ತಣ್ಣಗೆ ಒಪ್ಪಲೇಬೇಕಾಯಿತು. ಚಂಪಾರಣ್ಯದ ಅವರ ಗೆಲುವಿನೊಂದಿಗೆ ಗಾಂಧಿಯವರಿಗೆ ಮಹಾತ್ಮಾ ಎಂಬ ಹೆಸರು ಜನರಿಟ್ಟ ಅನ್ವರ್ಥನಾಮವಾಯಿತು. ಅದು ಪತ್ರಕರ್ತರಾಗಲೀ ರಾಜಕೀಯ ವೀಕ್ಷಕರಾಗಲೀ ಕೊಟ್ಟದ್ದಾಗಿರದೇ ಅವರು ಯಾರ ಪರ ಹೋರಾಡುತ್ತಿದ್ದರೋ ಆ ಲಕ್ಷಾಂತರ ಜನರು ಕೊಟ್ಟದ್ದಾಗಿತ್ತು.
೧೯೨೦ ರಲ್ಲಿ ಕಾಂಗ್ರೆಸ್ಸನ್ನು ಪುನರ್ ಸಂಘಟಿಸಲಾಯಿತು. ಸ್ವರಾಜ್ಯ(ಸ್ವಾತಂತ್ರ್ಯ) ವನ್ನು ಗುರಿಯಾಗಿ ಹೊಂದಿದ ಹೊಸ ಸಂವಿಧಾನವನ್ನು ರಚಿಸಲಾಯಿತು. ಸಾಂಕೇತಿಕ ಶುಲ್ಕವನ್ನು ಕೊಡಲು ಸಿದ್ಧರಿದ್ದ ಯಾರಿಗೇ ಆಗಲಿ ಸದಸ್ಯತ್ವವು ಮುಕ್ತವಾಯಿತು. ಹಂತ ಹಂತವಾದ ಸಮಿತಿಗಳನ್ನು ರಚಿಸಿ ಅವಕ್ಕೆ ಇಲ್ಲಿಯವರೆಗೆ ಬಿಡಿ-ಬಿಡಿಯಾಗಿದ ಸಣ್ಣ-ಪುಟ್ಟ ಚಳುವಳಿಗಳನ್ನು ನೀತಿ-ನಿಯಮಗಳಿಂದ ನಿಯಂತ್ರಿಸುವ ಭಾರವನ್ನು ವಹಿಸಲಾಯಿತು. ಕಾಂಗ್ರೆಸ್ ಪಾಳೆಯವು ಧೀಮಂತರ ಸಂಸ್ಥೆಯಿಂದ ದೇಶವ್ಯಾಪೀ ಜನರು ಭಾಗವಹಿಸುವ ಸಂಘಟನೆಯಾಯಿತು.
ಪ್ರತಿಭಟನೆಗಳು ಬ್ರಿಟಿಷರ ವಿರುದ್ಧವಾಗಿರದೆ ವಿದೇಶೀ ಅನ್ಯಾಯದ ಆಳ್ವಿಕೆಯ ವಿರುದ್ಧವಾಗಿರಬೇಕೆಂದು ಗಾಂಧಿಯವರು ಸದಾ ಒತ್ತಿ ಹೇಳುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳೂ ಮನುಷ್ಯರೇ; ಬೇರೆ ಭಾರತೀಯರೋ ಅಥವಾ ಇತರ ಜನರಂತೆಯೇ ಅಸಹಿಷ್ಣುತೆ,ವರ್ಣಭೇದ ಹಾಗೂ ಕ್ರೌರ್ಯದಂತಹ ತಪ್ಪು ಮಾಡುವುದರಲ್ಲಿ ಅಚ್ಚರಿಯೇನು ಎಂಬುದು ಅವರ ವಾದ. ಅವರ ಆ ಪಾಪಗಳಿಗೆ ಶಿಕ್ಷೆ ನೀಡುವುದು ದೇವರ ಕೆಲಸವೇ ಹೊರತು ಸ್ವರಾಜ್ಯ ಚಳುವಳಿಯದಲ್ಲ ಎಂದವರು ನಂಬಿದ್ದರು. ಆದರೆ ಸಮಾಜಕಂಟಕ ರಾಜ್ಯದಾಹಿಗಳಿಂದ ೩೫ ಕೋಟಿ ಜನರನ್ನು ಮುಕ್ತಗೊಳಿಸುವುದು ಮಾತ್ರ ಚಳುವಳಿಯ ಧ್ಯೇಯವಾಗಿತ್ತು.
ಗಾಂಧಿ ತಮ್ಮ ಮೊದಲ ದೇಶದುದ್ದಗಲದ ಸತ್ಯಾಗ್ರಹದಲ್ಲಿ ಜನರನ್ನು ಬ್ರಿಟಿಷ್ ಶಿಕ್ಷಣಸಂಸ್ಥೆಗಳನ್ನು, ನ್ಯಾಯಾಲಯಗಳನ್ನು ಮತ್ತು ಉತ್ಪನ್ನಗಳನ್ನು ಬಹಿಷ್ಕರಿಸಲು, ಸರಕಾರದ ನೌಕರಿಗಳಿಗೆ ರಾಜೀನಾಮೆ ಕೊಡಲು,ತೆರಿಗೆಗಳನ್ನು ಕೊಡದಿರಲು ಮತ್ತು ಬ್ರಿಟಿಷ್ ಬಿರುದು ಮತ್ತು ಪ್ರಶಸ್ತಿಗಳನ್ನು ತ್ಯಜಿಸಲು ಒತ್ತಾಯಿಸಿದರು. ಇದು ೧೯೧೯ ರ ಹೊಸ ಗವರ್ನ್‍‍ಮೆಂಟ್ ಆಫ್ ಇಂಡಿಯಾ ಆಕ್ಟ್ ನ ಮೇಲೆ ಪ್ರಭಾವ ಬೀರಲು ಬಹಳ ತಡವಾಗಿತ್ತಾದರೂ ಈ ಚಳುವಳಿಯ ಫಲಸ್ವರೂಪವಾದ ಅವ್ಯವಸ್ಥೆಯು ಅಭೂತಪೂರ್ವವಾಗಿದ್ದು, ಸರಕಾರಕ್ಕೆ ಹೊಸ ಸವಾಲನ್ನು ಒಡ್ಡಿತು. ಭಾರತದ ಪ್ರತಿಯೊಂದು ಭಾಗದ ಸಾವಿರಾರು ಹಳ್ಳಿ ಪಟ್ಟಣಗಳಲ್ಲಿ ಒಂದು ಕೋಟಿಗೂ ಹೆಚ್ಚಾದ ಜನರು ಗಾಂಧಿಯವರ ನಿರ್ದೇಶನಗಳಿಗನುಸಾರವಾಗಿ ಪ್ರತಿಭಟಿಸಿದರು. ಆದರೆ ಚೌರಿ ಚೌರಾದಲ್ಲಿ ಕೆಲವು ಪ್ರತಿಭಟನೆಗಾರರ ಗುಂಪಿನಿಂದ ಪೋಲೀಸರ ಘೋರಹತ್ಯೆಯಿಂದಾಗಿ ಗಾಂಧಿ ಒಂದು ಕಠಿಣ ನಿರ್ಧಾರ ಕೈಗೊಂಡು ಚಳುವಳಿಯನ್ನು ೧೯೨೨ರಲ್ಲಿ ಹಿಂದಕ್ಕೆ ಪಡೆದರು.
ಈ ಘಟನೆಯಿಂದ ಬಲು ಖಿನ್ನರಾದ ಗಾಂಧಿಯವರು, ಮುಂದಾಗಬಹುದಾದ ಅನಾಹುತಗಳನ್ನು ಮನಗಂಡರು. ಇಲ್ಲಿಯಂತೆಯೇ ದೇಶದ ಇತರ ಭಾಗಗಳಲ್ಲಿಯೂ ಪ್ರತಿಭಟನಾಕಾರರ ಗುಂಪುಗಳ ಸಹನೆಯ ಕಟ್ಟೆಯೊಡೆದು, ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮವು ಬ್ರಿಟಿಷರನ್ನು ಕಗ್ಗೊಲೆಗೈಯುವ ರಕ್ತದೋಕುಳಿಯ ದೊಂಬಿ-ಗಲಭೆಗಳ ಮಟ್ಟಕ್ಕಿಳಿದುಹೋಗಬಹುದೆಂದೂ, ಅದನ್ನು ಹತ್ತಿಕ್ಕಲು ಬ್ರಿಟಿಷರು ಅಮಾಯಕ ನಾಗರಿಕರ ಮೇಲೆ ಬಲಪ್ರಯೋಗ ಮಾಡಬಹುದೆಂದೂ ಅವರಿಗೆ ತಿಳಿದಿತ್ತು. ಭಾರತೀಯರಿಗೆ ಮತ್ತಷ್ಟು ಶಿಸ್ತು ಸಂಯಮಗಳು ಬೇಕಿದೆಯಲ್ಲದೆ, ಪ್ರತಿಭಟನೆಯ ಉದ್ದೇಶ ಬ್ರಿಟಿಷರನ್ನು ಶಿಕ್ಷಿಸುವುದಾಗಿರದೆ, ಅವರ ದಬ್ಬಾಳಿಕೆ ಹಾಗೂ ಭೇದೋಪಾಯಗಳ ಹಿಂದಿನ ಕ್ರೌರ್ಯ ಮತ್ತು ಕೆಟ್ಟತನವನ್ನು ಜಗತ್ತಿಗೆ ತೋರಿಸುವುದು ಎಂದೂ ಭಾರತೀಯರು ಅರಿಯಬೇಕಿದೆ ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಭಾರತವನ್ನು ವಿಮುಕ್ತಗೊಳಿಸುವುದರೊಡನೆ, ಬ್ರಿಟಿಷರನ್ನು ಸುಧಾರಣೆಗೊಳಪಡಿಸುವುದೂ, ಅವರನ್ನು ಸ್ನೇಹಿತರಂತೆ ಕಾಣುವುದೂ, ಜೊತೆಗೆ ಜಗತ್ತಿನೆಲ್ಲೆಡೆ ಜನಾಂಗೀಯ ಭೇದ ಮತ್ತು ಸಾಮ್ರಾಜ್ಯದಾಹವನ್ನು ಬಗ್ಗುಬಡಿಯುವುದು ಅವರ ಉದ್ದೇಶಗಳಾಗಿದ್ದವು.
ಅವರನ್ನು ೧೯೨೨ರಲ್ಲಿ ಆರು ವರ್ಷಗಳ ಬಂಧನಕ್ಕೊಳಪಡಿಸಲಾಯಿತಾದರೂ, ಎರಡು ವರ್ಷಗಳಿಗೆ ಬಿಡುಗಡೆಯಾಯಿತು. ಅನಂತರ, ಅವರು ಅಹಮದಾಬಾದ್‍ನ ಸಾಬರಮತಿ ನದೀತಟದಲ್ಲಿ ಸಾಬರಮತಿ ಆಶ್ರಮವನ್ನೂ, ಯಂಗ್ ಇಂಡಿಯಾ ಪತ್ರಿಕೆಯನ್ನೂ ಆರಂಭಿಸಿದರು. ಜೊತೆಗೆ, ಹಿಂದೂ ಸಮಾಜದ ಹಿಂದುಳಿದ ವರ್ಗಗಳಾದ ಅಸ್ಪೃಶ್ಯರು ಹಾಗೂ ಗ್ರಾಮೀಣ ಬಡವರಿಗೆ ತಲುಪುವ ಸುಧಾರಣೆಗಳ ಸರಣಿಗಳನ್ನೇ ಉದ್ಘಾಟಿಸಿದರು.
ಕಾಂಗ್ರೆಸ್ ನ ಉದಯೋನ್ಮುಖ ನಾಯಕರಾದ -- ಸಿ. ರಾಜಗೋಪಾಲಾಚಾರಿ (ರಾಜಾಜಿ), ಜವಹರಲಾಲ್ ನೆಹರುವಲ್ಲಭಭಾಯ್ ಪಟೇಲ್, ಮತ್ತಿತರರು -- ರಾಷ್ಟ್ರೀಯತಾವಾದವನ್ನು ರೂಪಿಸುವಲ್ಲಿ ಗಾಂಧಿಯವರ ಮುಂದಾಳುತನವನ್ನು ಎತ್ತಿಹಿಡಿದು ಬೆಂಬಲಿಸಿದರು. ೧೯೨೦ರ ದಶಕದ ಮಧ್ಯದಲ್ಲಿ ಸ್ವರಾಜ್ಯ ಪಕ್ಷಹಿಂದೂ ಮಹಾಸಭಾಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ದಂತಹ ಸೌಮ್ಯವಾದೀ ಹಾಗೂ ತೀವ್ರವಾದೀ ಪಕ್ಷಗಳ ಉದಯದಿಂದ ಭಾರತದ ರಾಜಕೀಯ ವ್ಯಾಪ್ತಿ ಹಿರಿದಾಯಿತು. ಪ್ರಾದೇಶಿಕ ರಾಜಕೀಯ ಸಂಸ್ಥೆಗಳೂ ಮದ್ರಾಸಿನಲ್ಲಿ ಅಬ್ರಾಹ್ಮಣರ, ಮಹಾರಾಷ್ಟ್ರದಲ್ಲಿ ಮಹರ್ ಗಳ ಹಾಗೂ ಪಂಜಾಬದಲ್ಲಿ ಸಿಖ್ಖರ ಭಾವನೆಗಳನ್ನು ಪ್ರತಿನಿಧಿಸುವುದನ್ನು ಮುಂದುವರೆಸಿದವು.

ದಂಡೀಯಾತ್ರೆ ಮತ್ತು ಅಸಹಕಾರ ಚಳುವಳಿ[ಬದಲಾಯಿಸಿ]

ಮುಖ್ಯ ಲೇಖನ: ಉಪ್ಪಿನ ಸತ್ಯಾಗ್ರಹ

ಉಪ್ಪಿನ ಸತ್ಯಾಗ್ರಹದ ದಂಡಿ ಯಾತ್ರೆಯ ಪ್ರಾರಂಭದ ಮುಂಚಿನ ಒಂದು ದೃಶ್ಯ
ಸೈಮನ್ ಆಯೋಗದ ಶಿಫಾರಸುಗಳ ತಿರಸ್ಕಾರದ ನಂತರ ಮುಂಬೈ ನಗರದಲ್ಲಿ ಮೇ ೧೯೨೮ರಲ್ಲಿ ಒಂದು ಸರ್ವ ಪಕ್ಷಗಳ ಸಭೆಯನ್ನು ಆಯೋಜಿಸಲಾಯಿತು. ಅಲ್ಲಿ ಮೋತಿಲಾಲ್ ನೆಹರೂರವರ ನೇತೃತ್ವದಲ್ಲಿ ಸಂವಿಧಾನದ ಒಂದು ಕರಡು ಪ್ರತಿಯನ್ನು ತಯಾರಿಸಲು ಸಮಿತಿಯನ್ನು ನೇಮಕ ಮಾಡಲಾಯಿತು. ನಂತರ ಕಲ್ಕತ್ತೆಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಡಿಸೆಂಬರ್ ೧೯೨೯ರ ಒಳಗೆ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಲಾಯಿತು. ಹೀಗಾಗದಿದ್ದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಅಸಹಕಾರ ಚಳುವಳಿ ನಡೆಸಲಾಗುವುದೆಂದು ತಿಳಿಸಲಾಯಿತು.
ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಡಿಸೆಂಬರ್ ೧೯೨೯ ರ ತನ್ನ ಐತಿಹಾಸಿಕ ಲಾಹೋರ್ ಅಧಿವೇಶನದಲ್ಲಿ , ಜವಾಹರಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ , ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ ಗಳಿಸುವ ಕುರಿತು ಗೊತ್ತುವಳಿಯೊಂದನ್ನು ಅಂಗೀಕರಿಸಿತು. ಅದು ದೇಶಾದ್ಯಂತ ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸಲು ಕಾರ್ಯಕಾರಿ ಸಮಿತಿಗೆ ಅಧಿಕಾರ ನೀಡಿತು.೨೬ ಜನವರಿ ೧೯೩೦ ಅನ್ನು ಪೂರ್ಣ ಸ್ವರಾಜ್ಯ ದಿನ ಎಂದು ದೇಶಾದ್ಯಂತ ಆಚರಿಸಲು ನಿರ್ಧರಿಸಲಾಯಿತು. ಭಾರತದ ಅನೇಕ ವೈವಿಧ್ಯಮಯ ರಾಜಕೀಯ ಪಕ್ಷಗಳು ಮತ್ತು ಕ್ರಾಂತಿಕಾರಿಗಳು ಆ ದಿನವನ್ನು ಅಭಿಮಾನ ಗೌರವಗಳಿಂದ ಆಚರಿಸಲು ಸಿದ್ಧವಾದರು .
ದೀರ್ಘಕಾಲದ ಏಕಾಂತವನ್ನು ಮುರಿದ ಗಾಂಧಿಯವರು, ೧೯೩೦ ರ ಮಾರ್ಚ್ ೧೨ ಮತ್ತು ಏಪ್ರಿಲ್ ೬ ರ ನಡುವೆ ಅಹಮದಾಬಾದ್ ನ ತಮ್ಮ ನೆಲೆಯಿಂದ ಸುಮಾರು ೪೦೦ ಕಿ.ಮೀ ದೂರದ ದಂಡಿ ವರೆಗೆ ಗುಜರಾತ್ ನ ಕಡಲತೀರದುದ್ದಕ್ಕೆ ತಮ್ಮ ಪ್ರಸಿದ್ಧ ಪಾದಯಾತ್ರೆಯನ್ನು ಕೈಗೊಂಡರು. ಉಪ್ಪಿನ ಮೇಲಿನ ಬ್ರಿಟಿಷರ ತೆರಿಗೆಗಳನ್ನು ಪ್ರತಿಭಟಿಸಿ , ದಂಡಿಯಲ್ಲಿ ಅವರು ಮತ್ತು ಅವರ ಸಾವಿರಾರು ಅನುಯಾಯಿಗಳು ಸಮುದ್ರದ ನೀರಿನಿಂದ ತಮ್ಮದೇ ಉಪ್ಪನ್ನು ತಯಾರಿಸಿ ಕಾನೂನನ್ನು ಮುರಿದರು . ಈ ನಡಿಗೆಯು ದಂಡಿ ಯಾತ್ರೆ ಅಥವಾ 'ಉಪ್ಪಿನ ಸತ್ಯಾಗ್ರಹ' ಎಂದು ಪ್ರಸಿದ್ಧವಾಗಿದೆ.
ಏಪ್ರಿಲ್ ೧೯೩೦ ರಲ್ಲಿ ಕಲ್ಕತ್ತಾ ದಲ್ಲಿ ಪೋಲೀಸರು ಮತ್ತು ಜನರ ನಡುವೆ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿದವು. ೧೯೩೦-೩೧ ರ ನಾಗರಿಕ ಅಸಹಕಾರ ಆಂದೋಲನದ ಕಾಲಕ್ಕೆ ಸುಮಾರು ಒಂದು ಲಕ್ಷ ಜನರನ್ನು ಬಂಧನದಲ್ಲಿಡಲಾಯಿತು. ಪೇಷಾವರದಲ್ಲಿ ಕಿಸ್ಸಾ ಖ್ವಾನೀ ಬಝಾರ್ ಹತ್ಯಾಕಾಂಡ ದಲ್ಲಿ ನಿಶ್ಶಸ್ತ್ರ ಪ್ರದರ್ಶನಕರರ ಮೇಲೆ ಗುಂಡು ಹಾರಿಸಲಾಯಿತು. ಗಾಂಧಿಯವರು ಜೈಲಿನಲ್ಲಿದ್ದಾಗ ಲಂಡನ್ನಿನಲ್ಲಿ ೧೯೩೦ ರ ನವೆಂಬರಿನಲ್ಲಿ ಮೊದಲ ದುಂಡು ಮೇಜಿನ ಪರಿಷತ್ತು ನಡೆಯಿತು . ಅದರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಾತಿನಿಧ್ಯ ಇರಲಿಲ್ಲ . ಸತ್ಯಾಗ್ರಹದಿಂದುಂಟಾದ ಅರ್ಥಿಕ ಸಂಕಷ್ಟಗಳಿಂದಾಗಿ ಕಾಂಗ್ರೆಸ್ಸಿನ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಇತರ ಸದಸ್ಯರನ್ನು ಜೈಲಿನಿಂದ ೧೯೩೧ ರ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು.
೧೯೩೧ರ ಮಾರ್ಚಿನಲ್ಲಿ ಗಾಂಧಿ-ಇರ್ವಿನ್ ಒಪ್ಪಂದ ಕ್ಕೆ ಸಹಿಬಿದ್ದು ಸರಕಾರವು ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆಮಾಡಲು ಒಪ್ಪಿತು. ಪ್ರತಿಯಾಗಿ ಗಾಂಧಿಯವರು ನಾಗರಿಕ ಅಸಹಕಾರ ಆಂದೋಲನವನ್ನು ಮುಂದುವರಿಸದಿರಲು ಮತ್ತು ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಲು ಒಪ್ಪಿದರು. ಆ ಪರಿಷತ್ತು ೧೯೩೧ರ ಸೆಪ್ಟೆಂಬರಿನಲ್ಲಿ ಲಂಡನ್ನಿನಲ್ಲಿ ಸಭೆ ಸೇರಿತು. ಆದರೆ ಪರಿಷತ್ತು ೧೯೩೧ರ ಡಿಸೆಂಬರಿನಲ್ಲಿ ವಿಫಲವಾಯಿತು. ೧೯೩೨ ರ ಜನವರಿಯಲ್ಲಿ ಗಾಂಧಿಯವರು ಭಾರತಕ್ಕೆ ಮರಳಿ ನಾಗರಿಕ ಅಸಹಕಾರ ಆಂದೋಲನವನ್ನು ಮುಂದುವರೆಸಲು ನಿರ್ಧರಿಸಿದರು.
ಮುಂದಿನ ಅನೇಕ ವರ್ಷ ಕಾಲ , ೧೯೩೫ರಲ್ಲಿ ಗವರ್ನಮೆಂಟ್ ಆಫ್ ಇಂಡಿಯಾ ಅಕ್ಟ್ ಸಿದ್ಧವಾಗುವ ವರೆಗೆ, ಸರಕಾರ ಮತ್ತು ಕಾಂಗ್ರೆಸ್ ಆಗಾಗ ಮಾತುಕತೆ ಹಾಗು ಸಂಘರ್ಷಗಳಲ್ಲಿ ತೊಡಗಿದವು. ಅಷ್ಟು ಹೊತ್ತಿಗೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗುಗಳ ಮಧ್ಯದ ಕಂದರವು ಮತ್ತೆ ಸೇರಿಸಲಾಗದಷ್ಟು ಅಗಲವಾಗಿತ್ತು. ಎರಡೂ ಪಕ್ಷಗಳು ಒಂದನ್ನೊಂದು ಕಟುವಾಗಿ ಟೀಕಿಸುತ್ತಿದ್ದವು. ಭಾರತದ ಎಲ್ಲ ಜನತೆಯನ್ನು ಪ್ರತಿನಿಧಿಸುವದಾಗಿ ಕಾಂಗ್ರೆಸ್ ಹೇಳಿಕೊಳ್ಳುವದನ್ನು ಮುಸ್ಲಿಂ ಲೀಗೂ, ಭಾರತದ ಎಲ್ಲ ಮುಸ್ಲಿಂ ಜನತೆಯನ್ನು ಪ್ರತಿನಿಧಿಸುವದಾಗಿ ಮುಸ್ಲಿಂ ಲೀಗ್ ಹೇಳಿಕೊಳ್ಳುವದನ್ನು ಕಾಂಗ್ರೆಸ್ಸೂ ಪ್ರಶ್ನಿಸುತ್ತಿದ್ದವು.

ಕ್ರಾಂತಿಕಾರೀ ಚಟುವಟಿಕೆಗಳು[ಬದಲಾಯಿಸಿ]


ಬಂಧನದ ನಂತರಉಧಾಮ್ ಸಿಂಗ್
ಚದುರಿದಂತೆ ಅಲ್ಲಲ್ಲಿನ ಕೆಲವು ಘಟನೆಗಳನ್ನು ಬಿಟ್ಟರೆ ಬ್ರಿಟಿಷ್ ಆಡಳಿತಗಾರರ ವಿರುದ್ಧದ ಸಶಸ್ತ್ರ ದಂಗೆಯು ೨೦ನೇ ಶತಮಾನದ ಆರಂಭದವರೆಗೆ ಸಂಘಟಿತವಾಗಿದ್ದಿಲ್ಲ. ಬಂಗಾಳದ ವಿಭಜನೆಯ ನಂತರ ೧೯೦೬ರಲ್ಲಿ ಅರಬಿಂದೊ ಘೋಷ್ ನೇತೃತ್ವದಲ್ಲಿ ರಹಸ್ಯವಾದ ಜುಗಾಂತರ್ ಪಕ್ಷ ಸ್ಥಾಪನೆಯಾಯಿತು [೨]. ಅರಬಿಂದೊ ಅವರ ಸಹೋದರ ಬರಿನ್ ಘೋಷ್ ಮತ್ತು ಬಾಘಾ ಜತೀನ್ರಂತಹ ಪಕ್ಷದ ನಾಯಕರು ಸ್ಫೋಟಕಗಳನ್ನು ತಯಾರಿಸಲು ಆರಂಭಿಸಿದರು. ಮುಜಾಫರಪುರದಲ್ಲಿ ಒಬ್ಬ ಬ್ರಿಟೀಷ್ ನ್ಯಾಯಾಧೀಶನನ್ನು ಸ್ಫೋಟಕದೊಂದಿಗೆ ಕೊಲ್ಲುವ ಪ್ರಯತ್ನ ವಿಫಲವಾದಾಗ ಅರಬಿಂದೊ ಅವರೊಂದಿಗೆ ಅನೇಕರು ಬಂಧಿತರಾದರು. ಒಟ್ಟು ೪೬ ಆರೋಪಿಗಳನ್ನು ಅಲಿಪುರದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಅನೇಕರನ್ನು ಗಡೀಪಾರು ಮಾಡಲಾಯಿತು. ಸ್ಫೋಟಕ ಯತ್ನದಲ್ಲಿ ಭಾಗಿಯಾಗಿದ್ದ ಖುದೀರಾಮ್ ಬೋಸ್ಗಲ್ಲಿಗೇರಿದರು. ಮರೆಯಾಗಲು ಪ್ರಯತ್ನಿಸಿದ ಬಾಘಾ ಜತಿನ್ ಪೋಲೀಸರ ಗುಂಡುಗಳಿಗೆ ಬಲಿಯಾದರು.
೧೯೧೪ರಲ್ಲಿ ಪ್ರಾರಂಭವಾದ ಮೊದಲನೇ ಮಹಾಯುದ್ಧವು ಕ್ರಾಂತಿಕಾರಿ ಚಟುವಟಿಕೆಗಳಿಗೆ ಪೂರಕವಾಯಿತು. ಇದರಲ್ಲಿ ಭಾಗವಹಿಸಲು ಯುವಕಯುವತಿಯರು ಅನುಶೀಲನ ಸಮಿತಿ, ಗದರ್ ಪಕ್ಷಇತ್ಯಾದಿಗಳನ್ನು ಸೇರಿಸಿಕೊಂಡರು. ಕ್ರಾಂತಿಕಾರಿಗಳು ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಜರ್ಮನಿಯಿಂದ ತರಿಸಿಕೊಂಡು ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯ ಹೂಡಲು ಯೋಜಿಸಿದರು.[೩] ಮೊದಲನೇ ಮಹಾಯುದ್ಧದ ನಂತರ ಅನೇಕ ಪ್ರಮುಖ ನಾಯಕರ ಬಂಧನದಿಂದಾಗಿ ಕ್ರಾಂತಿಕಾರಿ ಚಟುವಟಿಕೆಗಳು ಹಿನ್ನಡೆಯನ್ನು ಅನುಭವಿಸಿದವು. ೧೯೨೦ರ ಹೊತ್ತಿಗೆ ಕ್ರಾಂತಿಕಾರಿಗಳು ಮತ್ತೆ ಸಂಘಟಿತರಾಗತೊಡಗಿದರು.ಚಂದ್ರಶೇಖರ್ ಆಝಾದ್ ಮುಂದಾಳುತನದಲ್ಲಿ ಹಿಂದುಸ್ತಾನ್ ಸಮಾಜವಾದಿ ಗಣರಾಜ್ಯ ಸಂಘಟನೆ ರಚನೆಯಾಯಿತು. ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ೧೯೨೯ರ ಅಕ್ಟೊಬರ್ ೮ರಂದು ಕೇಂದ್ರೀಯ ಶಾಸನ ಸಭೆಯಲ್ಲಿ, ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ವ್ಯಾಪಾರ ವಿವಾದಗಳ ಮಸೂದೆಯನ್ನು ಅಂಗೀಕರಿಸುವದನ್ನು ಪ್ರತಿಭಟಿಸಿ, ಸ್ಫೋಟಕವನ್ನು ಎಸೆದರು. ಸೆಂಟ್ರಲ್ ಅಸೆಂಬ್ಲಿ ಬಾಂಬ್ ಮೊಕದ್ದಮೆಯ ವಿಚಾರಣೆಯ ನಂತರ ಭಗತಸಿಂಗ್ಸುಖದೇವ್ ಮತ್ತು ರಾಜಗುರು ಅವರನ್ನು ೧೯೩೧ರಲ್ಲಿ ನೇಣು ಹಾಕಲಾಯಿತು .
೧೮ ಏಪ್ರಿಲ್ ೧೯೩೦ ರಂದು ಸೂರ್ಯ ಸೇನ್, ಇತರ ಕಾರ್ಯಕರ್ತರ ಜತೆ ಸೇರಿಕೊಂಡು ಮದ್ದುಗುಂಡು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡು ಸರಕಾರೀ ಸಂಪರ್ಕ ವ್ಯವಸ್ಥೆಯನ್ನು ನಾಶಮಾಡಿ ಸ್ಥಳೀಯ ಸರಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ದಾಳಿಮಾಡಿದರು. ೧೯೩೨ರಲ್ಲಿ ಪ್ರೀತಿಲತಾ ವಡ್ಡೇದಾರ್ಚಿತ್ತಗಾಂಗ್ನಲ್ಲಿ ಯುರೋಪಿಯನ್ ಕ್ಲಬ್ಬಿನ ಮೇಲೆ ನಡೆದ ದಾಳಿಯ ಮುಂದಾಳತ್ವ ವಹಿಸಿದ್ದರು. ಬೀನಾ ದಾಸ್ಕಲ್ಕತ್ತಾ ವಿಶ್ವವಿದ್ಯಾನಿಲಯದ ಕಾನ್ವೋಕೇಶನ್ ಸಭಾಂಗಣದಲ್ಲಿ ಬಂಗಾಲದ ಗವರ್ನರ್ ಆದ ಸ್ಟ್ಯಾನ್ಲಿ ಜಾಕ್ಸನ್ರ ಹತ್ಯೆಗೆ ಯತ್ನಿಸಿದರು. ಚಿತ್ತಗಾಂಗ್ ಶಸ್ತ್ರಾಗಾರದ ದಾಳಿಮೊಕದ್ದಮೆಯ ನಂತರ , ಸೂರ್ಯ ಸೇನ್ರನ್ನು ನೇಣು ಹಾಕಲಾಯಿತು ಮತ್ತು ಅನೇಕರನ್ನು ಜೀವಾವಧಿ ಅಂಡಮಾನ್ ನಲ್ಲಿ ಸೆಲ್ಯುಲರ್ ಜೈಲ್ ಗೆ ಗಡೀಪಾರು ಮಾಡಲಾಯಿತು.
೧೩ ಮಾರ್ಚ್ ೧೯೪೦ರಂದು , ಲಂಡನ್ನಿನಲ್ಲಿ ಉಧಮ್ ಸಿಂಗ್ ಅಮೃತಸರ ಹತ್ಯಾಕಾಂಡಕ್ಕೆ ಕಾರಣ ಎಂದು ಪರಿಗಣಿಸಲಾದ ಮೈಕೇಲ್ ಓ ಡೈಯರ್ ನಿಗೆ ಗುಂಡು ಹಾಕಿದನು. ಆದರೆ , ೧೯೩೦ರ ದಶಕದ ಕೊನೆಯ ಭಾಗದಲ್ಲಿ - ಮುಖ್ಯಧಾರೆಯ ಅನೇಕ ನಾಯಕರು ಬ್ರಿಟಿಷರು ಕೊಡಮಾಡಿದ ವಿವಿಧ ಆಯ್ಕೆಗಳನ್ನು ಪರಿಗಣಿಸಿದರು ಮತ್ತು ಧಾರ್ಮಿಕ ರಾಜಕಾರಣವು ತಲೆ ಎತ್ತಿತು - ಹೀಗಾಗಿ ರಾಜಕೀಯ ಪರಿಸ್ಥಿತಿಯು ಬದಲಾಗಿ ಕ್ರಾಂತಿಕಾರಿ ಚಟುವಟಿಕೆಗಳು ಕ್ರಮೇಣ ನಶಿಸಿದವು. ಹಿಂದಿನ ಕ್ರಾಂತಿಕಾರಿಗಳು ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು, ವಿಶೇಷವಾಗಿ ಕಮ್ಮ್ಯೂನಿಸ್ಟ್ ಪಕ್ಷಗಳನ್ನು ಸೇರಿ ರಾಜಕಾರಣದ ಪ್ರಮುಖಧಾರೆಯನ್ನು ಸೇರಿದರು. ಕಾರ್ಯಕರ್ತರಲ್ಲಿ ಅನೇಕರನ್ನು ದೇಶದ ಅನೇಕ ಜೈಲುಗಳಲ್ಲಿ ಬಂಧನದಲ್ಲಿಡಲಾಯಿತು .

ಚುನಾವಣೆ ಹಾಗೂ ಲಾಹೋರ್ ಘೋಷಣೆ[ಬದಲಾಯಿಸಿ]

ಭಾರತದ ಆಳ್ವಿಕೆಯನ್ನು ಸುಧಾರಿಸಲು ಬ್ರಿಟೀಷರು ೧೯೩೫ರ ಭಾರತದ ಸರ್ಕಾರ ಕಾಯ್ದೆಯನ್ನು ಹೊರಡಿಸಿದರು. ಇದರ ಮೂರು ಪ್ರಮುಖ ಗುರಿಗಳು: ಪ್ರಾಂತ್ಯಗಳಿಗೆ ಹೆಚ್ಚು ಸ್ವಾತಂತ್ರ್ಯ, ಕೇಂದ್ರಾಡಳಿತದ ಸಡಿಲತೆ, ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆ. ಇದರಂತೆ ೧೯೩೭ರ ಫೆಬ್ರುವರಿಯಲ್ಲಿ ಪ್ರಾಂತೀಯ ಚುನಾವಣೆಗಳು ನಡೆದವು. ಕಾಂಗ್ರೆಸ್ ಪಕ್ಷವು ೫ ಪ್ರಾಂತ್ಯಗಳಲ್ಲಿ ಬಹುಮತ ಗಳಿಸಿ ಇನ್ನೆರಡರಲ್ಲಿ ಅತ್ಯಂತ ಹೆಚ್ಚಿನ ಸ್ಥಾನ ಪಡೆದ ಪಕ್ಷವಾಯಿತು.
೧೯೩೯ರಲ್ಲಿ ಆಗಿನ ವೈಸ್‌ರಾಯ್ ಲಾರ್ಡ್ ಲಿನ್ಲಿಥ್ಗೌ ಪ್ರಾಂತೀಯ ಸರ್ಕಾರಗಳಿಗೆ ತಿಳಿಸದೆಯೆ ಭಾರತವು ಎರಡನೇ ಮಹಾಯುದ್ಧವನ್ನು ಸೇರುತ್ತದೆಂದು ಘೋಷಿಸಿದರು. ಇದರ ವಿರೋಧವಾಗಿ ಕಾಂಗ್ರೆಸ್ ಪಕ್ಷ ತನ್ನ ಎಲ್ಲಾ ಪ್ರತಿನಿಧಿಗಳಿಗೂ ರಾಜೀನಾಮೆ ನೀಡುವಂತೆ ಅಪ್ಪಣೆ ನೀಡಿತು. ಆಗಿನ ಮುಸ್ಲಿಮ್ ಲೀಗ್‍ನ ಅಧ್ಯಕ್ಷ ಮೊಹಮದ್ ಆಲಿ ಜಿನ್ನಾ ೧೯೪೦ರಲ್ಲಿ ಲಾಹೋರ್‍ನಲ್ಲಿ ನಡೆದ ಲೀಗಿನ ವಾರ್ಷಿಕ ಸಮ್ಮೇಳನದಲ್ಲಿ, ಮುಂದೆಲಾಹೋರ್ ಘೋಷಣೆ ಎಂದು ಕರೆಯಲಾಗುವ ಘೋಷಣೆಯನ್ನು ಮಾಡಿದರು. ಇದರಂತೆ ಭಾರತವನ್ನು ಹಿಂದೂ ಮತ್ತು ಮುಸ್ಲಿಮ್ ಭಾಗಗಳಾಗಿ ವಿಂಗಡಿಸಬೇಕೆಂದು ಕೋರಲಾಯಿತು.

ಅಂತಿಮ ಹಂತ: ಕದನ, ಭಾರತ ಬಿಟ್ಟು ತೊಲಗಿ ಮತ್ತು ಯುದ್ಧಾನಂತರದ ದಂಗೆ[ಬದಲಾಯಿಸಿ]

ಚಿತ್ರ:Subhas Bose.jpg
ಸುಭಾಷ್ ಚಂದ್ರ ಬೋಸ್

The flag used by I.N.A.
ದೇಶಾದ್ಯಂತ ಭಾರತೀಯರು ಎರಡನೆ ವಿಶ್ವಯುದ್ಧದಲ್ಲಿ ವಿಭಜನೆಯಾದರು. ಬ್ರಿಟೀಷರು ಏಕಪಕ್ಷೀಯವಾಗಿ ಮತ್ತು ಭಾರತದ ಯಾವುದೇ ಚುನಾಯಿತ ಪ್ರತಿನಿಧಿಯೊಂದಿಗೆ ಸಮಾಲೋಚಿಸದೆ ಭಾರತವನ್ನು ವಿಶ್ವಯುದ್ಧಕ್ಕೆ ಧುಮುಕುವಂತೆ ಮಾಡಿದ್ದರು. ಯುನೈಟೆಡ್ ಕಿಂಗ್‍ಡಮ್‍ನ ಅತ್ಯಂತ ಮುಖ್ಯವಾಗಿದ್ದ, ಜೀವನ್ಮರಣದ ಹೋರಾಟವಾಗಿದ್ದ, ಆ ಯುದ್ಧದಲ್ಲಿ ಬ್ರಿಟೀಷರನ್ನು ಬೆಂಬಲಿಸಿದರೆ ತಮಗೆ ಸ್ವಾತಂತ್ರ್ಯ ಸಿಗಬಹುದೆಂದು ನಿರೀಕ್ಷಿಸಿ ಕೆಲವು ಭಾರತೀಯರು ಬ್ರೀಟೀಷರನ್ನು ಬೆಂಬಲಿಸುವ ಹಂಬಲ ತೋರಿಸಿದರು. ಇನ್ನಿತರರು ಭಾರತದ ತೇಜೋವಧೆ ಮಾಡುತ್ತಿರುವ, ನಾಗರೀಕ ಹಕ್ಕುಗಳನ್ನು ಕಡೆಗಣಿಸುತ್ತಿರುವ ಕಾರಣಕ್ಕೆ ಬ್ರಿಟೀಷರಿಂದ ರೋಸಿ ಹೋದರು. ಬಹಳಷ್ಟು ಜನ ಈ ಸಂಯುಕ್ತ ಹೋರಾಟವನ್ನು ವಿರೋಧಾಭಾಸವೆಂದು ಪರಿಗಣಿಸಿದರು. ಯಾವ ಸ್ವಾತಂತ್ರ್ಯಕ್ಕಾಗಿ ಭಾರತೀಯರನ್ನು 'ಮಾಡು ಇಲ್ಲವೆ ಮಡಿ' ಎಂಬ ಹೋರಾಟಕ್ಕಿಳಿಯಿರಿ ಎಂದು ಬ್ರಿಟೀಷರು ಕೇಳಿಕೊಳ್ಳುತ್ತಿದ್ದರೋ, ಅದೇ ಸ್ವಾತಂತ್ರ್ಯವನ್ನು ಅವರು ಭಾರತೀಯರಿಗೆ ಕೊಡಲು ನಿರಾಕರಿಸುತ್ತಿದ್ದರು. ಈ ಭಾವನಾತ್ಮಕ ವಾತಾವರಣದಲ್ಲಿ, ಎರಡು ಪ್ರಮುಖ ಬೆಳವಣಿಗೆಗಳು ನಿರ್ಮಾಣಗೊಂಡು ಸುಮಾರು ನೂರು ವರ್ಷಗಳ ಭಾರತೀಯ ಸ್ವಾತ್ರಂತ್ರ್ಯ ಹೋರಾಟದ ಕೊನೆಯ ಭಾಗಕ್ಕೆ ನಾಂದಿ ಹಾಡಿತು.

ಸ್ವತಂತ್ರ ಭಾರತ ಸೈನ್ಯ[ಬದಲಾಯಿಸಿ]

೧೯೩೭ ಮತ್ತು ೧೯೩೯ರಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾದ ಸುಭಾಷ್ ಚಂದ್ರ ಬೋಸ್, ಭಾರತೀಯರ ಅನುಮತಿಯಿಲ್ಲದೆಯೆ ಎರಡನೇ ಮಹಾಯುದ್ಧದಲ್ಲಿ ಸೇರ್ಪಡೆ ಮಾಡಿದ್ದನು ಬಲವಾಗಿ ಆಕ್ಷೇಪಿಸಿದರು. ಇದಕ್ಕೆ ಕಾಂಗ್ರೆಸ್ ಇಂದ ಬೆಂಬಲ ದೊರೆಯದಿದ್ದಾಗ, ಪಕ್ಷದಿಂದ ಹೊರಬಂದು ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಅನ್ನು ಸ್ಥಾಪಿಸಿದರು. ಇದಕ್ಕೆ ಗೃಹಬಂಧನದಲ್ಲಿ ಇರಿಸಿದಾಗ, ೧೯೪೧ರಲ್ಲಿ ತಪ್ಪಿಸಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಲು ಜರ್ಮನಿ ಮತ್ತು ಜಪಾನ್ ದೇಶಗಳ ಬೆಂಬಲ ಪಡೆದರು. ೧೯೪೩ರಲ್ಲಿ ಇವರು ಜಪಾನಿನಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿದರು. ಜಪಾನ್ ಯುದ್ಧದಲ್ಲಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳನ್ನು ಸೆರೆಹಿಡಿದಾಗ, ಅದನ್ನು ಬೋಸ್ ಅವರಿಗೆ ಒಪ್ಪಿಸಿದರು. ಸೇನೆಯು ಈಶಾನ್ಯ ಭಾರತವನ್ನು ಬ್ರಿಟೀಷರಿಂದ ಸ್ವತಂತ್ರಗೊಳಿಸಲು ಹೋರಾಡಿತು. ಆದರೆ ಸರಿಯಾದ ಶಸ್ತ್ರಾಸ್ತ್ರಗಳಿಲ್ಲದ ಈ ಸೇನೆ ಸೋಲನ್ನಪ್ಪಿತು. ೧೯೪೫ರಲ್ಲಿ ಜಪಾನ್ ಯುದ್ಧದಲ್ಲಿ ಶರಣಾಗತರಾದಾಗ, ಈ ಸೇನೆಯ ಪ್ರಯತ್ನಗಳು ನಿಂತವು. ೧೯೪೫ರ ಆಗಸ್ಟಿನಲ್ಲಿ ಬೋಸರು ವಿಮಾನ ಅಪಘಾತವೊಂದರಲ್ಲಿ ಮರಣಹೊಂದಿದರು ಎಂದು ನಂಬಲಾಗಿದೆ.
ಮೂರು ಭಾರತೀಯ ರಾಷ್ಟ್ರೀಯ ಸೇನೆಯ ಅಧಿಕಾರಿಗಳನ್ನು ವಿದ್ರೋಹಕ್ಕೆಂದು ವಿಚಾರಣೆಗೆ ಒಳಪಡಿಸಲಾಯಿತು. ಇದರಿಂದ ಅನೇಕ ಪ್ರತಿಭಟನೆಗಳು ಮತ್ತು ನೌಕಾಸೇನೆಯ ಬಂಡಾಯ ಆದವು. ಇದರ ಪರಿಣಾಮವಾಗಿ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಯಿತು. ಕ್ರಾಂತಿಕಾರಿ ವಿಧಾನಗಳನ್ನು ವಿರೋದಿಸಿದ್ದ ಕಾಂಗ್ರೆಸ್ ಪಕ್ಷವು ಸೇನೆಯ ಬಲಿದಾನವನ್ನು ಸತ್ಕರಿಸಿತು.

ಭಾರತ ಬಿಟ್ಟು ತೊಲಗಿ[ಬದಲಾಯಿಸಿ]

೧೯೩೯ರಲ್ಲಿ ಯುದ್ಧವು ಪ್ರಾರಂಭವಾದಾಗ ವಾರ್ಧಾದಲ್ಲಿ ಸೇರಿದ ಕಾಂಗ್ರೆಸ್ ಪಕ್ಷದ ನಾಯಕತ್ವ ಭಾರತಕ್ಕೆ ಸ್ವಾತಂತ್ರ್ಯ ನೀಡಿದಲ್ಲಿ ಬ್ರಿಟೀಷರಿಗೆ ಬೆಂಬಲ ನೀಡುವಂತೆ ನಿಶ್ಚಯಿಸಿದರು [೪]. ಸ್ವಾತಂತ್ರದ ಷರತ್ತನ್ನು ಬ್ರಿಟೀಷರು ಒಪ್ಪದಿದ್ದರಿಂದ ೧೯೪೨ರ ಆಗಸ್ಟಿನಲ್ಲಿ ಕಾಂಗ್ರೆಸ್ ಕೂಡಲೆ ಸ್ವಾತಂತ್ರ್ಯವನ್ನು ನೀಡಬೇಕೆಂದು ಆಗ್ರಹಿಸಿ "ಭಾರತ ಬಿಟ್ಟು ತೊಲಗಿ" ಎಂಬ ಒಂದು ನಾಗರೀಕ ಅಸಹಕಾರ ಆಂದೋಲನವನ್ನು ಕರೆದರು. ಮುಂಬೈನಲ್ಲಿ ಗಾಂಧೀಜಿಯವರು ಈ ಕೆರೆಯನ್ನು ಬೆಂಬಲಿಸಿ ಶಾಂತಿಯುತವಾಗಿ ಸರ್ಕಾರಕ್ಕೆ ಅಸಹಕಾರಿಯಾಗಿ ವರ್ತಿಸಬೇಕೆಂದು ಭಾರತೀಯರನ್ನು ಕೋರಿದರು. ಬ್ರಿಟೀಷರು ಯುದ್ಧದಲ್ಲಿ ನಿರತವಾಗಿರುವ ಪ್ರಸಂಗವನ್ನು ಉಪಯೋಗಿಸಿಕೊಳ್ಳಲು ಈ ಯತ್ನ ನಡೆಯಿತು. ಆದರೆ ಗಾಂಧೀಜಿಯವರ ಕರೆಯ ೨೪ಗಂಟೆಗಳಲ್ಲಿ ಕಾಂಗ್ರೆಸ್ಸಿನ ಇಡೀ ನಾಯಕತ್ವವನ್ನು ಬಂಧಿಸಲಾಯಿತು. ಅನೇಕರನ್ನು ಯುದ್ಧ ಮುಗಿಯುವವರೆಗೂ ಹೊರಬಿಡಲಾಗಲಿಲ್ಲ. ಈ ಕರೆಗೆ ಮತ್ತು ಸಾಮೂಹಿಕ ಬಂಧನಕ್ಕೆ ಭಾರತದಲ್ಲೆಲ್ಲಾ ಪ್ರತಿಭಟನೆಗಳು ನಡೆದವು. ಅನೇಕರು ಕೆಲಸಕ್ಕೆ ಹಾಜರಾಗಲಿಲ್ಲ. ಇನ್ನು ಕೆಲವರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತಾದ್ಯಂತ ಸುಮಾರು ೧೦೦,೦೦೦ ಜನರನ್ನು ಬಂಧಿಸಲಾಯಿತು. ೧೯೪೩ರ ಹೊತ್ತಿಗೆ ನಾಯಕರಿಲ್ಲದೆ ಈ ಚಳುವಳಿ ನಿಂತುಹೋಯಿತು.

ಭಾರತೀಯ ಮಹಾನೌಕಾಪಡೆಯ ದಂಗೆ[ಬದಲಾಯಿಸಿ]


ಮುಂಬೈಯಲ್ಲಿ ನೌಕಾಪಡೆಯ ದಂಗೆಯ ಸ್ಮರಣಾರ್ಥಕ ಪ್ರತಿಮೆ
ಫೆಬ್ರುವರಿ ೧೮೧೯೪೬ರಲ್ಲಿ ಮುಂಬೈನ ಬಂದರಿನಲ್ಲಿ ಭಾರತೀಯ ನೌಕಾಪಡೆಯ ನಾವಿಕರು ದಂಗೆಯೆದ್ದರು. ಬಹಳ ಬೇಗ ಈ ದಂಗೆ ಕರಾಚಿ ಮತ್ತು ಕಲ್ಕತ್ತೆಯ ಬಂದರುಗಳಿಗೂ ಹರಡಿತು. ಒಟ್ಟು ೭೮ ಹಡಗುಗಳು, ಮತ್ತು ಸುಮಾರು ೨೦,೦೦೦ ನಾವಿಕರು ಈ ದಂಗೆಯಲ್ಲಿ ಪಾಲ್ಗೊಂಡರು. ಬ್ರಿಟೀಷ್ ಅಧಿಕಾರಿಗಳ ಜನಾಂಗೀಯ ಬೇಧ ತೋರುವ ನಡವಳಿಕೆ, ಸಾಮಾನ್ಯ ಜೀವನ ಸ್ಥಿತಿಗಳು ಈ ದಂಗೆಗೆ ಕಾರಣವಾದವು. ಅಧಿಕಾರಿಗಳ ಅಪ್ಪಣೆಗಳ ನಿರ್ಲಕ್ಷೆ, ಹಡಗುಗಳಲ್ಲಿ ಭಾರತೀಯ ಧ್ವಜಗಳ ಹಾರಾಡುವಿಕೆ, ಮುಂತಾದ ಚಟುವಟಿಕೆಗಳು ನಡೆದವು. ಭಾರತೀಯ ನಾಗರೀಕರು ಈ ದಂಗೆಗೆ ಬೆಂಬಲ ನೀಡಿದರು. ನಂತರ ವಾಯು ಸೇನೆ ಮತ್ತು ಮುಂಬೈ ಪೋಲೀಸ್ ಕೂಡ ದಂಗೆಯಲ್ಲಿ ಸೇರಿದರು. ಮದ್ರಾಸು ಮತ್ತು ಪೂನೆಗಳಲ್ಲಿ ಸೇನಾ ತುಕಡಿಗಳು ಕೂಡ ದಂಗೆಯುದ್ದವು.
ಸ್ವಾತಂತ್ರ್ಯ ಚಳುವಳಿಯಲ್ಲಿನ ಅಂತಿಮ ಹಂತದ ಘಟನೆಗಳಲ್ಲಿ ಯಾವುದು ಹೆಚ್ಚಿನ ಪರಿಣಾಮ ಬೀರಿದ್ದು ಎಂಬುದು ಚರ್ಚಾಸ್ಪದ. ಕೆಲವರು "ಭಾರತ ಬಿಟ್ಟೂ ತೊಲಗಿ" ಪ್ರತಿಭಟನೆಯು ನಿಷ್ಫಲವಾಯಿತೆಂದೂ, ಮತ್ತು ಸೇನೆಗಳ ದಂಗೆಯು ಹೆಚ್ಚಿನ ಪ್ರಭಾವ ಬೀರಿತ್ತೆಂದು ಅಭಿಪ್ರಾಯ ಪಡುತ್ತಾರೆ. ಆ ಕಾಲದಲ್ಲಿ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದ ಕ್ಲೆಮೆಂಟ್ ಆಟ್ಲಿ ಈ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ [೫]. ಇನ್ನು ಕೆಲವು ಭಾರತೀಯ ಇತಿಹಾಸಕಾರರು ಅಸಹಕಾರ ಆಂದೋಲನಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಎರಡನೇ ಮಹಾಯುದ್ಧದಲ್ಲಿ ಆರ್ಥಿಕ, ರಾಜಕೀಯ ಮತ್ತು ಸೇನೆಗಳ ಅಪಾರ ಬೆಲೆಯನ್ನು ತೆತ್ತಿದ ಬ್ರಿಟೀಷ್ ಸಾಮ್ರಾಜ್ಯ ಈ ಆಂದೋಲನದಿಂದ ಎಚ್ಚೆದ್ದ ಭಾರತೀಯರನ್ನು ಸದೆಬಡೆಯುವ ಬಲವನ್ನು ಹೊಂದಿರಲಿಲ್ಲ. ಈ ನಾಗರೀಕ ಆಂದೋಲನದೊಂದಿಗೆ ನೌಕಾಪಡೆಯ ದಂಗೆ ಸೇರಿದಾಗ ಭಾರತವನ್ನು ಆಳುವುದನ್ನು ಮುಂದುವರೆಸುವುದರ ವಿಪರ್ಯಾಸವನ್ನು ಬ್ರಿಟಿಷ್ ಸಾಮ್ರಾಜ್ಯ ಅರಿತುಕೊಂಡಿತು [೬].
೧೯೪೬ರ ಮಧ್ಯದೊಳಗೆ ಎಲ್ಲಾ ರಾಜಕೀಯ ಕಾರಣಕ್ಕೆ ಬಂಧಿತರಾದವರನ್ನು ಸರ್ಕಾರ ವಿಮೋಚನೆಗೊಳಿಸಿತು. ಭಾರತದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಗುರಿಯಿಂದ ಕಾಂಗ್ರೆಸ್ಸು ಸರ್ಕಾರದೊಂದಿಗೆ ಮಾತುಕತೆ ಪ್ರಾರಂಭ ಮಾಡಿತು.೧೯೪೭ರ ಆಗಸ್ಟ್ ೧೫ರಂದು ಅಧಿಕಾರದ ಹಸ್ತಾಂತರ ಆಯಿತು.

ಸ್ವಾತಂತ್ರ್ಯ, ೧೯೪೭ ರಿಂದ ೧೯೫೦[ಬದಲಾಯಿಸಿ]

ಮುಖ್ಯ ಲೇಖನ: ಭಾರತದ ವಿಭಜನೆ
ಜೂನ್ ೩೧೯೪೭ರಂದು, ಕೊನೆಯ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಆದ , ಲಾರ್ಡ್ ಲೂಯಿ ಮೌಂಟ್‍ಬ್ಯಾಟನ್‍ರವರು ಜಾತ್ಯತೀತ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನ ಎಂದು ಎರಡು ಭಾಗಗಳಾಗಿ ಭಾರತದ ವಿಭಜನೆಯನ್ನು ಪ್ರಕಟಿಸಿದರು. ಅಗಸ್ಟ್ ೧೫೧೯೪೭ರ ಮಧ್ಯರಾತ್ರಿ ಭಾರತವು ಸ್ವತಂತ್ರ ರಾಷ್ಟ್ರವಾಯಿತು . ಹಿಂದುಮುಸ್ಲಿಂ, ಮತ್ತು ಸಿಖ್ ಜನರ ನಡುವೆ ಹಿಂಸಾತ್ಮಕ ಘರ್ಷಣೆಗಳು ಈ ವಿಭಜನೆಯನ್ನು ಅನುಸರಿಸಿದವು. ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಲಾರ್ಡ್ ಮೌಂಟ್‍ಬ್ಯಾಟನ್ ಅವರನ್ನು ಭಾರತದ ಗವರ್ನರ್ ಜನರಲ್ ಎಂದು ಮುಂದುವರೆಯಲು ಆಮಂತ್ರಿಸಿದರು. ಅವರ ಸ್ಥಳವನ್ನು ಜೂನ್ ೧೯೪೮ ರಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ತುಂಬಿದರು. ಪಟೇಲರು ೫೬೫ ರಾಜರುಗಳ ಸಂಸ್ಥಾನಗಳನ್ನು ಒಂದುಗೂಡಿಸುವ ಜವಾಬ್ದಾರಿಯನ್ನು ಹೊತ್ತರು. ಅವರು ಇದನ್ನು ತಮ್ಮ "ರೇಶಿಮೆಯ ಕೈಗವಸಿನಲ್ಲಿ ಉಕ್ಕಿನ ಕೈ" ನೀತಿಯಿಂದ ಸಾಧಿಸಿದುದಕ್ಕೆಜುನಾಗಢ , ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಪ್ರಾಂತ ಗಳನ್ನು ಭಾರತದಲ್ಲಿ ವಿಲೀನಗೊಳಿಸಿದುದು ಉದಾಹರಣೆಗಳು.
ಸಂವಿಧಾನ ರಚನಾಸಭೆಯು ಭಾರತದ ಸಂವಿಧಾನದ ಕರಡನ್ನು ಸಿದ್ಧಗೊಳಿಸುವ ಕೆಲಸವನ್ನು ನವೆಂಬರ್ ೨೬೧೯೪೯ರಂದು ಪೂರ್ತಿಗೊಳಿಸಿತು; ಜನವರಿ ೨೬೧೯೫೦ರಂದು ಭಾರತದ ಗಣರಾಜ್ಯವನ್ನು ಅಧಿಕೃತವಾಗಿ ಘೋಷಿಸಲಾಯಿತು. ಗವರ್ನರ್ ಜನರಲ್ ರಾಜಗೋಪಾಲಾಚಾರಿ ಅವರಿಂದ ಅಧಿಕಾರ ವಹಿಸಿಕೊಳ್ಳುವಂತೆ ಡಾ. ರಾಜೇಂದ್ರಪ್ರಸಾದರನ್ನು ಮೊದಲ ಭಾರತದ ರಾಷ್ಟ್ರಪತಿ ಎಂದು ಸಂವಿಧಾನ ರಚನಾಸಭೆಯು ಆಯ್ಕೆ ಮಾಡಿತು. ನಂತರ ಸ್ವತಂತ್ರ ಹಾಗೂ ಸಾರ್ವಭೌಮ ಭಾರತವು ಇನ್ನಿತರ ಎರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು. ಅವು ಯಾವುವೆಂದರೆ  : ಗೋವಾ (೧೯೬೧ ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಲ್ಪಟ್ಟಿತು ) ಮತ್ತು ಪಾಂಡಿಚೇರಿ ( ಫ್ರೆಂಚರು ೧೯೫೩-೧೯೫೪ ರಲ್ಲಿ ಭಾರತಕ್ಕೆ ಒಪ್ಪಿಸಿದರು. ೧೯೫೨ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದವು. ಮತದಾನ ಪ್ರಮಾಣವು ಶೇ. ೬೨ ಕ್ಕಿಂತ ಹೆಚ್ಚಿತ್ತು ; ಇದರ ಪರಿಣಾಮವಾಗಿ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದಂತಾಯಿತು .

ಮಹತ್ವದ ಮೈಲಿಗಲ್ಲುಗಳು[ಬದಲಾಯಿಸಿ]

  • ೧೯೩೫ : ಪ್ರಾಂತೀಯ ಸ್ವಯಂ ಆಡಳಿತ.

No comments:

Post a Comment